ಮರದ ಕೊಂಬೆ ಮುರಿದು ಬಿದ್ದು, ಸಾವನ್ನಪ್ಪಿದ್ದ ವಿದ್ಯಾರ್ಥಿ ಕುಟುಂಬಕ್ಕೆ 1 ಲಕ್ಷ ಪರಿಹಾರದ ಚೆಕ್ ವಿತರಣೆ.
ವಿಜಯಪುರ: ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯಲ್ಲಿ, ಮರದ ಕೊಂಬೆಯೊಂದು ಮುರಿದು ಬಿದ್ದು, 10 ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ, ಮೃತ ವಿದ್ಯಾರ್ಥಿಯ ಕುಟುಂಬಕ್ಕೆ, ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದುಕೊಂಡು, ಪುರಸಭೆಯಿಂದ 1 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಣೆ ಮಾಡಿದರು.
ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅವರು ಮಾತನಾಡಿ, ಮಗನ ಅಕಾಲಿಕ ಮರಣದಿಂದ ಇಡೀ ಕುಟುಂಬ ತುಂಬಾ ನೊಂದಿದ್ದಾರೆ. ಪುತ್ರ ಶೋಕ ನಿರಂತರವಾಗಿರುತ್ತದೆ. ಸರಕಾರದಿಂದ ಕೊಡುವಂತಹ ಪರಿಹಾರಧನದಿಂದ ಅವರ ಸಮಸ್ಯೆಗಳಿಗೆ ಪರಿಹಾರವಾಗುವುದಿಲ್ಲ. ಆದರೂ, ತಂದೆ, ತಾಯಿ, ಪೋಷಕರು, ಸ್ವತಃ ಧೈರ್ಯವನ್ನು ತಂದುಕೊಂಡು, ಮುಂದಿನ ಜೀವನದ ಕಡೆಗೆ ಗಮನಹರಿಸಬೇಕು. ಸಾರ್ವಜನಿಕರು, ಸಹಾ ರಸ್ತೆಗಳಲ್ಲಿ ತುಂಬಾ ಎಚ್ಚರಿಕೆಯಿಂದ ಸಂಚರಿಸಬೇಕು. ದ್ವಿಚಕ್ರ ವಾಹನ ಚಾಲಕರೆಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಇಂತಹ ಅಪಾಯಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾಗಿ ಮೃತಪಟ್ಟಿರುವ ವಿದ್ಯಾರ್ಥಿಯ ಕುಟುಂಬಕ್ಕೆ ಎಷ್ಟೇ ಪರಿಹಾರ ಕೊಟ್ಟರು, ಮೃತಪಟ್ಟ ಬಾಲಕನನ್ನು ಪುನಃ ವಾಪಸ್ಸು ತರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು, ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. 18 ವರ್ಷದೊಳಗಿನ ಮಕ್ಕಳಿಗೆ ವಾಹನಗಳನ್ನು ಕೊಡಬೇಡಿ, ವಾಹನ ಸವಾರರೂ ಸಹಾ ಕಡ್ಡಾಯವಾಗಿ ಹೆಲ್ಮೇಟ್ ಧರಿಸುವುದರ ಜೊತೆಗೆ, ತಮ್ಮ ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾ ಮಹಬೂಬ್ ಪಾಷ, ಸದಸ್ಯ ವಿ.ನಂದಕುಮಾರ್, ಬೈರೇಗೌಡ, ಸೈಯದ್ ಎಕ್ಭಾಲ್, ಮುಖಂಡರಾದ ಜಗ್ಗಣ್ಣ, ಕೆ.ಎಂ.ಮಧು, ಹರೀಶ್, ಅಧಿಕಾರಿ ಶ್ರೀನಿವಾಸ್, ಹಾಗೂ ವಿದ್ಯಾರ್ಥಿಯ ಪೋಷಕರು ಇದ್ದರು.





