ಮೇ. 16ರಂದು ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಅಣಕು ಪ್ರದರ್ಶನ (ಮಾಕ್ ಡ್ರಿಲ್)

ಚಾಮರಾಜನಗರ.ಇದೇ ಮೇ 15ರಂದು ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ನಿಗದಿಯಾಗಿದ್ದ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನವನ್ನು (ಮಾಕ್ ಡ್ರಿಲ್) ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಮೇ 16ರಂದು ಸಂಜೆ 4 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮರುನಿಗದಿ ಮಾಡಲಾಗಿದೆ.

ತುರ್ತು ಸಂದರ್ಭ ಅವಘಡಗಳು ಸಂಭವಿಸಿದ ಸಮಯದಲ್ಲಿ ಜನರು ಗಾಬರಿ ಅಥವಾ ಆತಂಕಕ್ಕೆ ಒಳಗಾಗದಂತೆ ಆತ್ಮವಿಶ್ವಾಸ ತುಂಬಿ ಅರಿವು ಮೂಡಿಸುವ ಉದ್ದೇಶದಿಂದ ಅಣಕು ಪ್ರದರ್ಶನವನ್ನು ನಡೆಸಲಾಗುತ್ತದೆ. ಇದು ಅಣಕು ಕಾರ್ಯಾಚರಣೆ ಮಾತ್ರವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು.

ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಅಣಕು ಕಾರ್ಯಚರಣೆ (ಮಾಕ್ ಡ್ರಿಲ್) ಪ್ರದರ್ಶನ ಕೈಗೊಂಡು ಜಾಗೃತಿ ಮೂಡಿಸಲಾಗುತ್ತದೆ. ಈ ಅಣಕು ಕಾರ್ಯಚರಣೆಗೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಹೋಂ ಗಾರ್ಡ್, ವೈದ್ಯಕೀಯ ತಂಡ, ಸಾರಿಗೆ ತಂಡ, ಕಂಟ್ರೋಲ್ ರೂಂ, ಇನ್ನಿತರ ತಂಡಗಳನ್ನು ರಚಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ತುರ್ತು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವ ವೇಳೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಗಾಯಗೊಂಡವರಿಗೆ ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ, ಪ್ರಥಮ ಚಿಕಿತ್ಸೆ, ಅಗ್ನಿಶಾಮಕ, ಪೊಲೀಸರು, ಇನ್ನಿತರ ಅಧಿಕಾರಿಗಳ ಕರ್ತವ್ಯ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಅಣಕು ಪ್ರದರ್ಶನದ ಮೂಲಕ ನಡೆಸಿ ಅರಿವು ಉಂಟು ಮಾಡಲಾಗುತ್ತದೆ.

ಅಣಕು ಕಾರ್ಯಾಚರಣೆಗೆ ಪೂರಕವಾಗಿರುವ ಎಲ್ಲ ಸಿದ್ದತೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು. ಅಗತ್ಯವಿರುವ ವಾಹನಗಳು, ಸಲಕರಣೆಗಳು, ಕಂಟ್ರೋಲ್ ರೂಂ, ಸಿಬ್ಬಂದಿ ನಿಯೋಜನೆ, ಆಂಬುಲೆನ್ಸ್‍ಗಳ ಕಾರ್ಯಚರಣೆ ಸೇರಿದಂತೆ ಎಲ್ಲವನ್ನು ಪರಿಪೂರ್ಣವಾಗಿ ಸಿದ್ದ ಮಾಡಿಕೊಂಡಿರಬೇಕು. ಜನರ ರಕ್ಷಣೆಗೆ ಕೈಗೊಳ್ಳಲಾಗುವ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಕ್‍ಡ್ರಿಲ್ ಮುಖಾಂತರ ತಿಳಿವಳಿಕೆ ನೀಡಬೇಕು. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಆರ್ ಉಮೇಶ್ ಮಲಾರಪಾಳ್ಯ