ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಕರೆ
ವಿಜಯಪುರ: ಪಟ್ಟಣದ ಧರ್ಮರಾಯಸ್ವಾಮಿ, ದ್ರೌಪದಮ್ಮ ದೇವಾಲಯದಲ್ಲಿ, ದೇವಾಲಯದ ಸಮಿತಿಯ ವತಿಯಿಂದ ದೇವರಿಗೆ ಬೆಳ್ಳಿ ಕವಚಧಾರಣೆ ಕಾರ್ಯಕ್ರಮದ ಅಂಗವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳು ಗಳಿಸಿಕೊಂಡಿರುವ ತಿಗಳ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ವೇಳೆ ಪುರಸಭೆ ಸದಸ್ಯ ವಿ.ನಂದಕುಮಾರ್ ಮಾತನಾಡಿ, ಯಾವುದೇ ಸಮುದಾಯವಿರಲಿ, ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿದಾಗ ಮಾತ್ರ, ಅಂತಹ ಸಮುದಾಯಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರ್ತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡುತ್ತಿರುವುದು ಶ್ಲಾಘನೀಯ. ಇದು ವಿದ್ಯಾರ್ಥಿಗಳಲ್ಲಿ ಬದ್ಧತೆಯನ್ನು ಹೆಚ್ಚಿಸುವುದರ ಜೊತೆಗೆ, ಸಮಾಜವು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸುವಂತಹ ಕಾರ್ಯವಾಗಬೇಕು ಎಂದರು.
ಪುರಸಭೆ ಸದಸ್ಯ ಎಂ.ರಾಜಣ್ಣ ಮಾತನಾಡಿ, ಪ್ರತಿಯೊಬ್ಬರೂ ಸಮಾಜಕ್ಕೆ ಏನಾದರೂ, ಕೊಡುಗೆ ನೀಡಬೇಕು. ಸಮಾಜದಿಂದ ನಾವು ಏನನ್ನು ಪಡೆದುಕೊಂಡಿದ್ದೇವೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ವಿದ್ಯಾಭ್ಯಾಸದ ಜೊತೆ ಜೊತೆಯಲ್ಲೆ, ನಮ್ಮ ಸಮುದಾಯದ ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನೂ ಪಾಲಿಸಬೇಕಾದಂತಹ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ ಎಂದರು.
ದೇವಾಲಯ ಕಮಿಟಿ ಅಧ್ಯಕ್ಷ ಎಂ.ಚಿನ್ನಯ್ಯ, ಕಾರ್ಯದರ್ಶಿ ಜಿ.ಎಂ.ಚಂದ್ರು, ಖಜಾಂಚಿ ಮುನಿನಾರಾಯಣಪ್ಪ, ಹಿರಿಯ ಮುಖಂಡ ಪಿ.ನಾರಾಯಣಪ್ಪ, ಮಾಜಿ ಪುರಸಭೆ ಸದಸ್ಯ ಮುನಿಚಿನ್ನಪ್ಪ, ಜೆ.ಆರ್.ಮುನಿವೀರಣ್ಣ, ಕರಾಟೆ ಮುನೀಂದ್ರ, ರವಿಕುಮಾರ್, ಪಿ.ಪ್ರಕಾಶ್, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ವೆಂಕಟೇಶ್, ಗೌಡರ ನಂಜುಂಡಪ್ಪ, ಗಣಾಚಾರಿಗಳು, ಗೌಡರು, ಯಜಮಾನರು, ವೀರಕುಮಾರರು ಹಾಜರಿದ್ದರು.