ಗುಣಮಟ್ಟದ ಹಾಲು ಪೂರೈಕೆಗೆ ಆಧ್ಯತೆ ನೀಡುವಂತೆ ಸಲಹೆ

ವಿಜಯಪುರ: ಹಾಲು ಉತ್ಪಾದಕರ ಬದ್ಧತೆ, ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಪ್ರಾಮಾಣಿಕತೆಯಿಂದಾಗಿ, ಹೈನುಗಾರಿಕೆ ಉಧ್ಯಮವು ಉತ್ತಮವಾಗಿ ಸಾಗಲು ಸಾಧ್ಯವಾಗುತ್ತದೆ ಎಂದು ಬಮೂಲ್ ನಿರ್ದೇಶಕ ಎಸ್.ಪಿ.ಮುನಿರಾಜು ಗೌಡ ಹೇಳಿದರು.
ಹೋಬಳಿಯ ಚಿಕ್ಕತತ್ತಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿರುವ ಮಾಜಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ವೀರಭದ್ರಪ್ಪ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ರೈತಾಪಿ ವರ್ಗದ ಬಹುತೇಕರು, ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ಪಾದಕರ ಹಿತ ಕಾಪಾಡುವುದು, ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ. ಒಕ್ಕೂಟದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು, ಸಹಕಾರಿ ಸಂಘಗಳ ಸಿಬ್ಬಂದಿ ಪ್ರಾಮಾಣಿಕವಾಗಿ ಉತ್ಪಾದಕರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಉತ್ಪಾದಕರೂ ಸಹಾ, ಗುಣಮಟ್ಟದ ಹಾಲು ಉತ್ಪಾದನೆಯ ಜೊತೆಗೆ, ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಉಪಾದ್ಯಕ್ಷ ಮುನಿಆಂಜಿನಪ್ಪ, ಎಂ.ಶ್ರೀನಿವಾಸ್, ಡಿ.ವಿ.ಮಾಚಪ್ಪ, ಎಂ.ತಿಮ್ಮರಾಯಪ್ಪ, ವಿ.ನಾಗರಾಜ್, ರಮೇಶ್, ಮುನಿನರಸಿಂಹಪ್ಪ, ಆಶಾ, ನಾಗವೇಣಮ್ಮ, ನಿವೃತ್ತ ಪಿಡಿಓ ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಾಚಪ್ಪ, ಹಂಗಾಮಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಸಿ.ತಿಮ್ಮರಾಯಪ್ಪ, ವಿಸ್ತರಣಾಧಿಕಾರಿ ಹೇಮಾ ಅವರು ಹಾಜರಿದ್ದರು.