ಕೋಲಾರ ಮುಖ್ಯರಸ್ತೆಯುದ್ಧಕ್ಕೂ, ಸಸಿಗಳನ್ನು ನೆಟ್ಟು, ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಲು ಒತ್ತಾಯ

ವಿಜಯಪುರ: ಪಟ್ಟಣದ ಕೋಲಾರ ಮುಖ್ಯರಸ್ತೆಯ ಇಕ್ಕೆಲುಗಳಲ್ಲಿ, ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಪಟ್ಟಣದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ, ಪ್ರಾಣಿ, ಪಕ್ಷಿಗಳಿಗೆ ಆಶ್ರಯ ಒದಗಿಸಿ, ರಸ್ತೆಗಳ ಸೌಂದರ್ಯವನ್ನು ಹೆಚ್ಚಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.
ಕೋಲಾರ ಮುಖ್ಯರಸ್ತೆಯನ್ನು, 9.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ಪುರಸಭೆ ಸರ್ಕಲ್ ನಿಂದ ವಿಜಯಪುರದ ಗಡಿಯವರೆಗೂ ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲುಗಳಲ್ಲಿ ಬೆಳೆದು ನಿಂತಿದ್ದ, ವಿವಿಧ ಜಾತಿಯ ಮರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ರಸ್ತೆಯುದ್ಧಕ್ಕೂ ಎಲ್ಲಿಯೂ ಮರಗಳಿಲ್ಲ. ಈ ಮರಗಳಲ್ಲಿ ವಾಸ ಮಾಡುತ್ತಿದ್ದ, ವಿವಿಧ ಜಾತಿಯ ಪಕ್ಷಿಗಳು, ಕೋತಿಗಳಿಗೆ ನೆಲೆಯಿಲ್ಲದೆ, ಮನೆಗಳ ಬಳಿಗೆ ಸುಳಿಯುತ್ತಿವೆ. ರಸ್ತೆಯುದ್ದಕ್ಕೂ ವಿದ್ಯುತ್ ಕಂಬಗಳನ್ನು ಹೊರತು ಪಡಿಸಿ ಇನ್ನೇನು ಕಾಣಿಸುವುದಿಲ್ಲ.
ರಸ್ತೆಗೆ ಡಾಂಬರೀಕರಣದ ಬದಲಾಗಿ, ಮುಂದಿನ 40 ವರ್ಷಗಳ ಕಾಲ ರಸ್ತೆ ಸುರಕ್ಷಿತವಾಗಿರಬೇಕು ಎನ್ನುವ ಕಾರಣಕ್ಕಾಗಿ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಬೇಸಿಗೆಯಲ್ಲಿ ಬಿಸಿಲು ಹೆಚ್ಚಾದಾಗ, ರಸ್ತೆಯ ಇಕ್ಕೆಲುಗಳಲ್ಲಿರುವ ಅಂಗಡಿಗಳ ವ್ಯಾಪಾರಿಗಳು, ಸುತ್ತಮುತ್ತಲಿನ ನಾಗರಿಕರು, ಬಿಸಿಲಿನ ತಾಪಮಾನ ಹಾಗೂ ಸಿ.ಸಿ.ರಸ್ತೆಯಿಂದ ಹೊರಬರುವ ಬಿಸಿಗಾಳಿಯಿಂದಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ರಸ್ತೆಯುದ್ಧಕ್ಕೂ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು.
ರಸ್ತೆಯ ಇಕ್ಕೆಲುಗಳಲ್ಲಿ ಮರಗಳು ಬೆಳೆದರೂ ಯಾವುದೇ ತೊಂದರೆಯಾಗಲಾರದು. ರಸ್ತೆಯುದ್ಧಕ್ಕೂ ಕನಿಷ್ಟ ಹತ್ತು ಅಡಿಗೊಂದರಂತೆ ಸಸಿಗಳನ್ನು ನೆಟ್ಟು, ಪೋಷಣೆ ಮಾಡಬೇಕು, ಅರಣ್ಯ ಇಲಾಖೆಯವರು, ಸಸಿಗಳನ್ನು ನೆಟ್ಟರೆ, ರಸ್ತೆಯ ಇಕ್ಕೆಲುಗಳಲ್ಲಿರುವ ವ್ಯಾಪಾರಿಗಳೇ ಅವುಗಳಿಗೆ ನೀರು ಹಾಕಿ ಪೋಷಣೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ರಸ್ತೆಯಿಂದ ಹೊರ ಬರಬಹುದಾದ ಬಿಸಿಗಾಳಿಯನ್ನು ತಡೆಗಟ್ಟಲು ಅನುಕೂಲವಾಗುವುದರ ಜೊತೆಗೆ, ಸಾವಿರಾರು, ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳಾದ ಸುದರ್ಶನ್, ಹರ್ಷವರ್ಧನ್, ನವೀನ್ ಕುಮಾರ್ ಅವರು, ಒತ್ತಾಯಿಸಿದ್ದಾರೆ.