ಮೃತ ರೈತರ 25000 ರೂ ಸಾಲ ಮನ್ನಾ – ಕೆ ಎನ್ ರಾಜಣ್ಣ
ಚಿಕ್ಕನಾಯಕನಹಳ್ಳಿ: ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳಲ್ಲಿ ಸಾಲ ಪಡೆದು ಮೃತರಾದ ರೈತರ ವಾರಸುದಾರರಿಗೆ ಇಪ್ಪತ್ತೈದು ಸಾವಿರ ರೂಗಳ ಮಿತಿಗೊಳಪಟ್ಟು ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಿ ಯೋಜನೆಯ ಅನುಕೂಲ ಪಡೆಯುವಂತೆ ತಿಳಿಸಲು ಸಹಕಾರ ಸಂಘಗಳ ಸಿ.ಇ.ಓ.ಗಳಿಗೆ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾರ್ಗದರ್ಶನ ಮಾಡಿದರು.
ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ನ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ನವರು ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದು ಮೃತರಾದ ರೈತರ ವಾರಸುದಾರರಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಡಿ.31 ಕೊನೆಯ ದಿನವಾಗಿದ್ದು ಸಂಬಂಧಿಸಿದವರು ಸ್ಥಳೀಯ ಸಹಕಾರ ಸಂಘಗಳಿಗೆ ಸೂಕ್ತ ದಾಖಲೆಗಳನ್ನು ಸಕಾಲಕ್ಕೆ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ.
ಈ ಯೋಜನೆಯು 2022ರ ಅಕ್ಟೋಬರ್ 01 ರಿಂದ 2025ರ ಮಾರ್ಚ್ 31ರೊಳಗೆ ಮೃತ ಪಟ್ಟ ಸಹಕಾರ ಸಂಘದ ಸಾಲಗಾರ ರೈತರುಗಳ ವಾರಸುದಾರರಿಗೆ ಅನುಕೂಲವಾಗಿದೆ. ಇಪ್ಪತ್ತೈದು ಸಾವಿರ ರೂಗಳಿಗಿಂತ ಹೆಚ್ಚಿಗೆ ಸಾಲ ಪಡೆದು ಸಾವನ್ನಪ್ಪಿದ್ದರೆ, ಉಳಿಕೆ ಸಾಲದ ಹಣಕ್ಕೆ ಬಡ್ಡಿಯನ್ನು ಸಹ ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು, ಅಲ್ಪಾವಧಿ ಕೃಷಿ ಸಾಲವನ್ನು ಮರುಪಾವತಿ ಮಾಡದ ಸುಸ್ತಿ ಹಾಗೂ ಬಾಕಿ ಇರುವವರಿಗೂ ಈ ಯೋಜನೆ ಅನುಕೂಲವಾಗಲಿದ್ದು, ಮೃತ ರೈತರ ಕುಟುಂಬದ ವಾರಸುದಾರರುಗಳು ತಮ್ಮ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಥವಾ ಡಿ.ಸಿ.ಸಿ.ಬ್ಯಾಂಕಿನ ತಾಲೂಕು ಮೇಲ್ವಿಚಾರಕರುಗಳ ಮೂಲಕ ಮಾಹಿತಿಯನ್ನು ಪಡೆದು, ಅಗತ್ಯ ದಾಖಲಾತಿಗಳನ್ನು ಬ್ಯಾಂಕಿನ ಮೇಲ್ವಿಚಾರಕರುಗಳ ಮೂಲಕ ಪ್ರಧಾನ ಕಚೇರಿಗೆ ಸಲ್ಲಿಸಲು ರೈತರಿಗೆ ಮಾಹಿತಿ ನೀಡುವಂತೆ ಸಿಂಗದಹಳ್ಳಿ ರಾಜಕುಮಾರ್ ಸಭೆಯಲ್ಲಿ ತಿಳಿಸಿದ್ದಾರೆ.
ವರದಿ :ಚೇತನ್ ಜಿ ಜಾನಕಲ್





