ಮದ್ದೂರು ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ
ಯಳಂದೂರು:ತಾಲ್ಲೂಕಿನ ಮದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಸಂವಿಧಾನ ಜಾಗೃತಿ ಜಾಥಾ ನಡೆಯಿತು.
ಮದ್ದೂರಿನಲ್ಲಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿ ಸ್ವಾಗತ ನೀಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾಗ್ಯಮ್ಮ, ಉಪಾಧ್ಯಕ್ಷರಾದ ವೆಂಕಟರಮಣ, ಇತರೆ ಸದಸ್ಯರು ಬಾಬಾಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಜಾಥಾ ಬರಮಾಡಿಕೊಂಡರು.
ಗ್ರಾಮೀಣ ಕಲೆಯಾದ ದೊಣ್ಣೆ ವರಸೆಯನ್ನು ಗ್ರಾಮಸ್ಥರು ಪ್ರದರ್ಶಿಸಿದರು. ಮುಳ್ಳಿನ ಚಂಡು ಸುತ್ತುವುದು, ಬಾಕು, ಪಿಚ್ಚುಕೊಳ್ಳಿ, ಕತ್ತಿವರಸೆ, ಪ್ರದರ್ಶನ ಮಾಡಿದರು. ಹುಲಿವೇಷ, ಮಂಗಳವಾದ್ಯ, ನಗಾರಿ, ತಮಟೆ, ಡೊಳ್ಳುಗಳ ನಾದದೊಂದಿಗೆ ಜಾಥಾ ಸಾಗಿತು. ಶಾಲಾ ವಿದ್ಯಾರ್ಥಿಗಳು ರಾಷ್ಟನಾಯಕರ ವೇಷ ಭೂಷಣಗಳನ್ನು ಧರಿಸಿ ಗಮನ ಸೆಳೆದರು. ರಸ್ತೆ ಉದ್ದಕ್ಕೂ ಯುವಕರು ಮಾರಿಕುಣಿತ ಕುಣಿದು ಕುಪ್ಪಳಿಸಿದರು.
ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡರು. ಗ್ರಾಮಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ವೇದಿಕೆ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಲಿಖಿತ ಅವರು ಮಾತನಾಡಿ ಭಾರತ ಸಂವಿಧಾನ ಇತರೆ ರಾಷ್ಡ್ರಗಳ ಸಂವಿಧಾನಕ್ಕಿಂತ ವಿಶೇಷವಾಗಿದೆ. ನಮ್ಮ ಸಂವಿಧಾನ 395 ಮೂಲವಿಧಿಗಳನ್ನು ಒಳಗೊಂಡು ವಿಶ್ವದಲ್ಲಿಯೇ ಬೃಹತ್ ಸಂವಿಧಾನವಾಗಿದೆ. ಸರ್ವರು ಸಮಾನರಾಗಿ ಬಾಳಬೇಕೆಂಬ ಉದ್ದೇಶವನ್ನು ಸಂವಿಧಾನ ಇಟ್ಟುಕೊಂಡಿದೆ ಎಂದರು.
ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಕಾಣಬೇಕೆಂಬ ಕನಸನ್ನು ಅಂಬೇಡ್ಕರ್ರವರು ಹೊಂದಿದ್ದರು. ಸಂವಿಧಾನದ ಅರಿವು ಹೆಚ್ಚಾದಷ್ಟು ಕೋಮುಗಲಭೆ, ಅನಿಷ್ಟ ಪದ್ದತಿಗಳು ನಾಶಗೊಳ್ಳುತ್ತವೆ. ರಾಜ್ಯ ಸರ್ಕಾರ ನಾಡಿನ ಜನರಿಗೆ ಸಂವಿಧಾನದ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಮುಂದಾಗಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದು ಲಿಖಿತ ಅವರು ತಿಳಿಸಿದರು.
ವರದಿ ಆರ್ ಉಮೇಶ್ ಮಲಾರಪಾಳ್ಯ