ದನದ ಕೊಟ್ಡಿಗೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ: ದನಗಳ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡು ಹಸು ಸೇರಿ ರೈತನಿಗೆ ಸುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಹಾಡೋ‌ನಹಳ್ಳಿಯಲ್ಲಿ ನಡೆದಿದೆ.

ಹಾಡೋನಹಳ್ಳಿ ಗ್ರಾಮದ ರೈತ ರಾಜಣ್ಣ ಎನ್ನುವವರು ಕೊಟ್ಟಿಗೆಯಲ್ಲಿ ಎಂದಿನಂತೆ ಹಸುಗಳನ್ನು ಕಟ್ಟಿ ಮಲಗಿದ್ದರು. ಗುರುವಾರ ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ಕಿಡಿಗೇಡಿಗಳು ಕೊಟ್ಟಿಗೆಯ ಮೇಲೆ ಹೊದಿಕೆ ಮಾಡಿದ್ದ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಂಕಿ ಹರಡಿರುವುದನ್ನು ಕಂಡ ಸ್ಥಳೀಯರು ರಾಜಣ್ಣನಿಗೆ ತಿಳಿಸಿದ್ದು, ಘಟನೆಯಲ್ಲಿ ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿವೆ, ಹಸುವನ್ನು ರಕ್ಷಿಸಲು ಮುಂದಾದ ರೈತ ರಾಜಣ್ಣ ಹಾಗೂ ಆತನ ಮಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.