ಮತಗಟ್ಟೆ ದ್ವಂಸ ಪ್ರಕರಣದಿಂದ ಭಯಭೀತರಾಗಿ ಕಾಡಿನಲ್ಲಿ ಅವಿತಿದ್ದ ಇಂಡಿಗನತ್ತ ಗ್ರಾಮಸ್ಥರಿಗೆ ಧೈರ್ಯ ಹೇಳಿ ಕರೆತಂದ ಅಧಿಕಾರಿಗಳು

ಚಾಮರಾಜನಗರ ಹನೂರು ತಾಲ್ಲೂಕಿನಲ್ಲಿ ನಡೆದ ಘಟನೆ

ಇದೇ ತಿಂಗಳ ಏಪ್ರಿಲ್ 26ರ ಲೋಕಸಭಾ ಚುನಾವಣಾ ಮತದಾನ ದಿನದಂದು ಇಂಡಿಗನತ್ತ ಗ್ರಾಮಸ್ಥರು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತಗಟ್ಟೆ ದ್ವಂಸ ಮಾಡಿ, ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ ಚಲಾಯಿಸಲು ಆಗಮಿಸಿದ್ದ ಮೆಂದಾರೆ ಗ್ರಾಮದ ಜನರ ಮೇಲೆ ಹಲ್ಲೆ ಮಾಡಿ ಬಳಿಕ ಬಂಧನಕ್ಕೆ ಒಳಗಾಗುವ ಭೀತಿಯಿಂದ ಗ್ರಾಮದಲ್ಲಿನ ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಹಿರಿಯರನ್ನು ಹೊರತುಪಡಿಸಿ ಉಳಿದ ಎಲ್ಲರೂ ಊರು ಬಿಟ್ಟು ಕಾಡಿನಲ್ಲಿ ಅವಿತಿದ್ದರು.

ಇದರಿಂದ ಗ್ರಾಮದಲ್ಲಿ ಚಿಕ್ಕಮಕ್ಕಳು ಹಾಗೂ ಹಿರಿಯರು ಮತ್ತು ಜಾನುವಾರು ಗಳನ್ನು ಆರೈಕೆ ಮಾಡುವವರೇ ಇಲ್ಲದಂತಾಗಿ ಗ್ರಾಮದಲ್ಲಿ ಶೂನ್ಯಭಾವ ಆವರಿಸಿತ್ತು.­

ಇದನ್ನು ಮನಗಂಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಗ್ರಾಮಸ್ಥರನ್ನು ಮರಳಿ ಊರಿಗೆ ಕರೆತರಲು ಮನವೊಲಿಸುವಂತೆ ಕಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ಡಿ ವೈ ಎಸ್ ಪಿ ಧರ್ಮೇಂದ್ರ ಮತ್ತು ಇತರೆ ಪೊಲೀಸ್ ಆಧಿಕಾರಿಗಳು ಅರಣ್ಯದಲ್ಲಿ ಅವಿತಿದ್ದ ಇಂಡಿಗನತ್ತ ಗ್ರಾಮಸ್ಥರಿಗೆ ಧೈರ್ಯ ತುಂಬಿ ಊರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಶಾಂತಿಸಭೆ ನಡೆಸುವಲ್ಲಿ ಸಫಲರಾಗಿದ್ದಾರೆ.

ವರದಿ ಆರ್ ಉಮೇಶ್ ಮಲಾರಪಾಳ್ಯ