ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವುದು ಮುಖ್ಯ–ಮಧುಕರ್ ಶೆಟ್ಟಿ

ದೊಡ್ಡಬಳ್ಳಾಪುರ:ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದುವುದು ಮುಖ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಕರ್ ಶೆಟ್ಟಿ ತಿಳಿಸಿದರು.

ತಾಲ್ಲೂಕಿನ ಕೋನಘಟ್ಟಗ್ರಾಮದಲ್ಲಿ ಕೆನರಾ ಬ್ಯಾಂಕ್ ನ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕಿನ ಶಾಖೆಗಳನ್ನು ತೆರೆದು ಆ ಭಾಗದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರಗಳನ್ನು ಮಾಡುವ ಮೂಲಕ ಆ ಭಾಗವನ್ನು ಅಭಿವೃದ್ಧಿ ಪಡೆಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದರು.

ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನಗದು ರಹಿತ ವ್ಯವಹಾರ ಮಾಡಬಹುದಾಗಿದೆ. ಇದರಿಂದ ಸಮಯದ ಉಳಿತಾಯ ಹಾಗೂ ಸುರಕ್ಷಿತ ವ್ಯವಹಾರ ಮಾಡಬಹುದಾಗಿದೆ ಎಂದರು. ಗೃಹ ಸಾಲ, ವಾಣಿಜ್ಯ ಸಾಲ, ಕೃಷಿ ಸಾಲ. ಹೈನುಗಾರಿಕೆ ಸಾಲ ಹಾಗೂ ಇತರೆ ರೀತಿಯ ಸಾಲದ ಸೌಲಭ್ಯವಿದ್ದು ಕೂಲಿ ಕಾರ್ಮಿಕರಿಗೆ ಶೂನ್ಯ ಮೊತ್ತದ ಖಾತೆಗಳನ್ನು ತೆರೆಯಲು ಅವಕಾಶವಿದೆ. ಈ ಮೂಲಕ ಸರ್ಕಾರದ ಅನುದಾನಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಬಹುದಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 14 ನೇ ಕೆನರಾ ಬ್ಯಾಂಕ್ ಶಾಖೆ ಇದಾಗಿದ್ದು, ಕೋನಘಟ್ಟ ಭಾಗದ ಸುತ್ತಮುತ್ತ ಕೈಗಾರಿಕೆ ಚಟುವಟಿಕೆಗಳು ಪ್ರಾರಂಭವಾಗಿದ್ದು ಜನಸಾಮನ್ಯರಿಗೆ ಹಣಕಾಸು ಬ್ಯಾಂಕ್ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಶಾಖೆಯನ್ನು ತೆರೆಯಲಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು ತಿಳಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಬೆಂಗಳೂರು ವೃತ್ತ ಕಛೇರಿಯ ಪ್ರಬಂಧಕ ವ್ಯವಸ್ಥಾಪಕ ಮಹೇಶ್ ಪೈ, ದೇವನಹಳ್ಳಿ ವಲಯ ಕಚೇರಿಯ ವ್ಯವಸ್ಥಾಪಕ ವೆಂಕಟ ರಾಮುಲು, ಕೊನಘಟ್ಟ ಶಾಖೆಯ ವ್ಯವಸ್ಥಾಪಕ ಉದಯ್ ಕಿರಣ್ ಸೇರಿದಂತೆ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರು ಸೇರಿದಂತೆ ಇತರರು ಉಪಸ್ಥಿತರಿದ್ದರು