ಸಾಗುವಳಿ ಚೀಟಿಗೆ ಒತ್ತಾಯಿಸಿ ಹೋರಾಟಕ್ಕೆ ಮುಂದಾದ ಕರ್ನಾಟಕ ಭೂ ಹಕ್ಕುದಾರರ ವೇದಿಕೆ

ದೊಡ್ಡಬಳ್ಳಾಪುರ : ಬಗ‌ರ್ ಹುಕ್ಕುಂ ಸಾಗುವಳಿ ಸಮಿತಿ ರಚನೆಯಾಗಿದ್ದು, ಕಂದಾಯ ಸಚಿವರು, ನಮ್ಮ ಪರವಾಗಿ ಇದ್ದರು, ಸಾಗುವಳಿ ಸಮಿತಿಯು ನಿಗದಿತ ಸಮಯಕ್ಕೆ ಸಭೆಯನ್ನು ನಡೆಸದೆ ಮಾನ್ಯ ಶಾಸಕರು ಮತ್ತು ಅಧಿಕಾರಿಗಳು ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ ನಾಗರತ್ನ ಆರೋಪಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ನೆಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು ನಾವುಗಳು ನಮ್ಮ ಪೂರ್ವಿಕರ ಕಾಲದಿಂದಲೂ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಅಕ್ರಮ- ಸಕ್ರಮಕ್ಕಾಗಿ ಸರ್ಕಾರದ ಆದೇಶದಂತೆ ನಮೂನೆ 53 ಮತ್ತು 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಆದರೆ ಸಾಗುವಳಿ ಚೀಟಿ ವಿತರಣೆಗೆ ಸಂಬಂಧಪಟ್ಟಂತೆ ಮಾನ್ಯ ಶಾಸಕರಿಗೂ ಅಧಿಕಾರಿಗಳಿಗೂ, ಎಷ್ಟೇ ಮನವಿ ಪತ್ರ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ನಮ್ಮ ಅರ್ಜಿಯ ಸ್ಥಿತಿ ಗತಿಯ ವಿವರಗಳು ನಮಗೆ ಯಾವುದೇ ಮಾಹಿತಿಯೂ ಸಿಗುತ್ತಿಲ್ಲ ಎಂದರು.

ಸಾಗುವಳಿ ಸಮಿತಿ ಸಭೆಯಲ್ಲಿ ಮಂಜೂರಾಗಿರುವ ರೈತರಿಗೆ ಸಾಗುವಳಿ ಚೀಟಿ ಮತ್ತು ಟಿ.ಟಿ ಕಟ್ಟುವವರಿಗೆ ನೋಟೀಸು ನೀಡಿಲ್ಲ. ಆದ ಕಾರಣ” ನಮ್ಮ ಭೂಮಿ ನಮ್ಮ ಹಕ್ಕು” ಎಂಬ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ಹೋರಾಟದ ಬೇಡಿಕೆಗಳೇನು?

* ಬಗ‌ರ್ ಹುಕ್ಕುಂ ಸಮಿತಿಯ ಸಭೆಯನ್ನು ಮಾಡಿ ಬಾಕಿ ಇರುವ ಸಾಗುವಳಿ ಚೀಟಿಯನ್ನು ವಿತರಣೆ ಮಾಡುವುದು.

* ಕಂದಾಯ ಮತ್ತು ಅರಣ್ಯ ಇಲಾಖೆಯನ್ನು ಭೂಮಿಯನ್ನು ಜಂಟಿ ಸರ್ವೆ ಮಾಡುವುದು,

* ಪಹಣಿಯಲ್ಲಿ ಪಿ. ಮತ್ತು ಸರ್ಕಾರಿ ಗೋಮಾಳ ಎಂಬ ಹೆಸರನ್ನು ತೆಗೆಯುವುದು,

* ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವನನ್ನು ಓಕ್ಕಲೆಬ್ಬಿಸದೇ ಸಾಗುವಳಿ ಚೀಟಿ ನೀಡತಕ್ಕದ್ದು.

* ಸಾಗುವಳಿ ಸಭೆಯಲ್ಲಿ ನಡೆದ ಮಾಹಿತಿಯನ್ನು ನೋಟೀಸ್ ಬೋರ್ಡಿಗೆ ಹಾಕುವುದು, ಮತ್ತು ಸಾಗುವಳಿ ಸಮಿತಿ ದಿನಾಂಕವನ್ನು ನೋಟೀಸ್ ಬೋರ್ಡಿಗೆ ಹಾಕುವುದು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಭೂ ಹಕ್ಕುದಾರಿಕೆಯ ವೇದಿಕೆಯ ರಾಜ್ಯಾಧ್ಯಕ್ಷರಾದ ಎಸ್.ವಿ ನರಸಪ್ಪ, ಜಿಲ್ಲಾ ಸಂಚಾಲಕರಾದ ವಿ.ನಾಗರತ್ನ ಮತ್ತು ಬಗರ್ ಹುಕ್ಕುಂ ಸಾಗುವಳಿಯ ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ ,ಹಾಗೂ ನಾಗಾನಾಯಕ್, ಪಿಳ್ಳಪ್ಪ ನರಸಿಂಹಯ್ಯ, ಹುಚ್ಚಹನುಮಯ್ಯ, ಹನುಮಂತರಾಯಪ್ಪ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು