ಸಾಧನೆಯ ಹಾದಿಯಲ್ಲಿ ಅಭಿವೃದ್ಧಿಯ ತೋರಣ” ಕಿರು ಹೊತ್ತಿಗೆ ಲೋಕಾರ್ಪಣೆ
ಕೃಷ್ಣರಾಜಪೇಟೆ:ಎಲ್ಲರಿಗೂ ಎಲ್ಲಾ ಕೆಲಸವನ್ನು ಮಾಡಲಾಗುವುದಿಲ್ಲ. ಕೆಲವರಿಗೆ ಸಾಧಸುವ ಮನಸ್ಸು ಮತ್ತು ಸಂಕಲ್ಪ ಎರಡೂ ಇರುತ್ತದೆ. ಅಂತಹ ವ್ಯಕ್ತಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬೂಕನಕೆರೆ ಹೋಬಳಿ ರಾಜೇನಹಳ್ಳಿ ಗ್ರಾಮದ ಪ್ರಗತಿಗೆ ಶ್ರಮಿಸಿದ ಕುಮಾರಸ್ವಾಮಿಯವರ ಕುರಿತಾಗಿ ಮೈಸೂರಿನ ಗರುಡ ಪ್ರೇಮ ಅರುಣ್ನಾಯಕ್ ಹೊರ ತಂದಿರುವ “ಸಾಧನೆಯ ಹಾದಿಯಲ್ಲಿ ಅಭಿವೃದ್ಧಿಯ ತೋರಣ” ಎಂಬ ಕಿರು ಹೊತ್ತಿಗೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ತಮ್ಮ ಹುಟ್ಟೂರು ರಾಜೇನಹಳ್ಳಿಯ ಸಮಗ್ರವಾದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಂಘಟನೆಯನ್ನು ಮಾಡಿ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರುಗಳಿಂದ ಸುಮಾರು 1 ಕೋಟಿ 29 ಲಕ್ಷ ರೂಪಾಯಿಗಳ ಅನುದಾನವನ್ನು ತಂದು ಕೇವಲ 50 ಮನೆಗಳ ಕುಗ್ರಾಮಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಇವರ ಈ ಕೆಲಸ ನಮ್ಮಂತಹ ಯುವ ರಾಜಕಾರಣಿಗಳಿಗೂ ಸ್ಪೂರ್ತಿದಾಯಕವಾಗಿದೆ. ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ತನ್ನ ಹುಟ್ಟೂರಿನ ಅಭಿವೃದ್ಧಿಗೆ ತಲೆಕೆಡಿಸಿಕೊಂಡ ಕುಮಾರಸ್ವಾಮಿ ಅವರಂತಹ ಸಮಾಜಮುಖಿ ಕಾಳಜಿ ಹೊಂದಿರುವ ಯುವ ಜನರು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು._
_22 ಜನ ಚುನಾಯಿತ ಜನಪ್ರತಿನಿಧಿಗಳಿಂದ ಅದರಲ್ಲೂ ಹೊರ ಜಿಲ್ಲೆಯ ಪ್ರತಿನಿಧಿಗಳಿಂದ ಅನುದಾನವನ್ನು ತಂದು ಕೆಲಸ ಮಾಡುವುದು ಸುಲಭವೇನಲ್ಲ. ನಮ್ಮನ್ನು ಪ್ರತಿನಿಧಿಸುವವರೆ ಅನುದಾನವನ್ನು ಕೊಡುವುದು ಕಷ್ಠ. ಆದರೆ ಕುಮಾರಸ್ವಾಮಿಯವರು 1ಕೋಟಿ 29ಲಕ್ಷ ರೂಪಾಯಿ ಅನುದಾನ ಪಡೆದುಕೊಂಡು ಗ್ರಾಮಕ್ಕೆ ಅಗತ್ಯವಾಗಿ ಬೇಕಾದ ಕಾಂಕ್ರೀಟ್ ರಸ್ತೆ, ಚರಂಡಿ, ಬಸ್ ನಿಲ್ದಾಣ, ಸ್ವಾಗತ ಕಾಮಾನು, ದೇವಸ್ಥಾನ, ಅರಳಿಕಟ್ಟೆ, ಶುದ್ಧ ಕುಡಿಯುವ ನೀರಿನ ಘಟಕ, ಹೈ ಮಾಸ್ಟ್ ಲೈಟ್, ಗ್ರಂಥಾಲಯ ಸೇರಿದಂತೆ ಅಗತ್ಯವಾಗಿ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಸಿ ಮಾದರಿಯಾಗಿದ್ದಾರೆ. ಯಾರೂ ಕೂಡಾ ರಾಜೇನಹಳ್ಳಿ ಗ್ರಾಮವನ್ನು ಕಂಡರೆ ಮೂಗು ಮುರಿಯುವ ಪರಿಸ್ಥತಿಯಿಲ್ಲದಂತೆ ನೋಡಿಕೊಂಡಿದ್ದಾರೆ ಎಂದು ಶಾಸಕ ಮಂಜು ಶ್ಲಾಘಿಸಿದರು._
_ಈ ಸಂದರ್ಭದಲ್ಲಿ ಮಾತನಾಡಿದ ರಾಜೇನಹಳ್ಳಿ ಕುಮಾರಸ್ವಾಮಿ ನಮ್ಮ ಪರಿಶ್ರಮವನ್ನು ಕಣ್ಣಾರೆ ಕಂಡ ಮೈಸೂರಿನ ಗರುಡಪ್ರೇಮ ಅರುಣ್ ನಾಯಕ ಅವರು ಗ್ರಾಮದಲ್ಲಿ ಅನುಷ್ಠಾನವಾಗಿರುವ ಕೆಲಸ ಕಾರ್ಯಗಳನ್ನು ಸಚಿತ್ರ ಸಮೇತವಾಗಿ ಹೊರ ತಂದಿದ್ದು ನಾಡಿನ ಯುವ ಜನರಿಗೆ ಪ್ರೇರಕ ಶಕ್ತಿಯಾಗಲಿ ಎಂಬ ಸದುದ್ದೇಶದಿಂದ ಪುಸ್ತಕ ಹೊರ ತರಲಾಗಿದೆ. ನನ್ನ ಈ ಅಳಿಲು ಸೇವೆಗೆ ಮಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು._
_ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಸಿಂಡಿಕೇಟ್ ಸದಸ್ಯ ರಾಮಚಂದ್ರನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೆಳವೇಗೌಡ, ಜೆಡಿಎಸ್ ಮುಖಂಡ ಕುರುಬಳ್ಳಿ ನಾಗೇಶ್, ಸೋಮಶೇಖರ್, ಗರುಡಪ್ರೇಮ ನಾಯಕ್, ಗ್ರಾಮದ ಮುಖಂಡರುಗಳಾದ ಮಹೇಶ್, ಶಿವಲಿಂಗೇಗೌಡ, ಗೋಕರ್ಣ, ರಾಮಕೃಷ್ಣೇಗೌಡ, ಚೇತನ್, ರತನ್, ವೆಂಕಟರಾಮೇಗೌಡ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು._
*_ಚಿತ್ರ ಶೀರ್ಷಿಕೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜೇನಹಳ್ಳಿ ಗ್ರಾಮದ ಕುರಿತಾದ “ಸಾಧನೆಯ ಹಾದಿಯಲ್ಲಿ ಅಭಿವೃದ್ಧಿಯ ತೋರಣ” ಎಂಬ ಕಿರು ಹೊತ್ತಿಗೆಯನ್ನು ಶಾಸಕ ಹೆಚ್.ಟಿ.ಮಂಜು ಬಿಡುಗಡೆಗೊಳಿಸಿದರು.
*_ವರದಿ ಸಾಯಿಕುಮಾರ್.ಎನ್. ಕೆ_*