ಸಂತೆಮರಹಳ್ಳಿ ಪೊಲೀಸ್ ಠಾಣೆ ಹಾಗೂ ನಿಸರ್ಗ ಟ್ರಸ್ಟ್ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ

ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಸಂತೆಮರಹಳ್ಳಿ ಪೊಲೀಸ್ ಠಾಣೆ, ತಾಲ್ಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಹಾಗೂ ನಿಸರ್ಗ ಟ್ರಸ್ಟ್ ಸಹಯೋಗದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಡಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ದೌರ್ಜನ್ಯ ಮತ್ತು ಪರಿಹಾರ, ಹಾಗೂ ಕ್ಷಯ ರೋಗದ ಕುರಿತು ಆರೋಗ್ಯ ನೈರ್ಮಲ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.

ಕಾರ್ಯಕ್ರಮವನ್ನು ಚಾಮರಾಜನಗರ ಡಿ ವೈ ಎಸ್ ಪಿ. ಶ್ರೀ ಲಕ್ಷ್ಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು, ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ರವರು ಮಾತನಾಡಿ ಸಾರ್ವಜನಿಕರಲ್ಲಿ ಕಾನೂನಿನ ಅರಿವು ಕೊರತೆ ಇರುವ ಕಾರಣ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ತಿಳಿವಳಿಕೆ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರಿಂದ ಸ್ವಲ್ಪ ಮಟ್ಟಿನ ಅರಿವು ಜನರಲ್ಲಿ ಉಂಟಾಗಿದೆ,ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸುವ ಮೂಲಕ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬೇಕಾಗಿ, ಮಹಿಳೆಯರಿಗೆ ಹೆಚ್ಚಿನ ಕಾನೂನು ಅರಿವು ಅಗತ್ಯವಿದೆ
ಇತ್ತೀಚಿನ ದಿನಗಳಲ್ಲಿ ಒಂಟಿ ಮಹಿಳೆಯರು ರಸ್ತೆಯಲ್ಲಿ ಹೋಗುವಾಗ ಸರಗಳ್ಳತನ ನಡೆಯುತ್ತಿದೆ. ಯಾರೂ ಇಲ್ಲದ ಮನೆಗಳಲ್ಲಿ ದರೋಡೆ ನಡೆಯುತ್ತದೆ. ಇಂತಹ ಪ್ರಕರಣಗಳನ್ನು ತಡೆಯಲು ಬೀಟ್ ಪೊಲೀಸರಿಂದ ಅಪರಾಧ ಮಾಸಾಚರಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಮೊಬೈಲ್‌ ಫೋನ್‌ ಪ್ರಪಂಚ ನಿರ್ಮಾಣವಾಗಿದ್ದು, ಇದರಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಸಾರ್ವಜನಿಕರು ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಪಿಎಸ್ಐ,ಟಿ. ಎಂ. ತಾಜುದ್ದೀನ್ ರವರು ಮಾತನಾಡಿ ಮೊದಲಿಗೆ ಹೆಣ್ಣು ಮಕ್ಕಳಿಗೆ ಕಾನೂನಿನ ಅರಿವಿನ ಬಗ್ಗೆ ಹೆಚ್ಚಾಗಿ ತಿಳಿಸಬೇಕು,ಅಪ್ರಾಪ್ತ ವಯಸ್ಸಿನ ಮಕ್ಕಳ ಹಿತರಕ್ಷಣೆ ಉದ್ದೇಶದಿಂದ ಪೋಕ್ಸೊ ಕಾಯ್ದೆ ಜಾರಿ ಮಾಡಲಾಯಿತು.

ಅಪ್ರಾಪ್ತ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ರಕ್ಷಿಸುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿದ್ದು, ಇದರ ಮತ್ತೊಂದು ಅಂಶವೆಂದರೆ ಇದರಲ್ಲಿ ಯಾವುದೇ ಲಿಂಗ ತಾರತಮ್ಯ ಇರುವುದಿಲ್ಲ. ಬಾಲಕಿ ಹಾಗೂ ಬಾಲಕರಿಬ್ಬರನ್ನೂ ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ಗುರುತಿಸಲಾಗುತ್ತದೆ. ಇನ್ನು ಪೋಕ್ಸೊ ಕಾಯ್ದೆಯ ಸೆಕ್ಷನ್‌ 35ರ ಪ್ರಕಾರ, ಪ್ರಕರಣದ ವಿಚಾರಣೆಗೆ ಕಾಲಮಿತಿ ನಿಗದಿ ಮಾಡಲಾಗಿದೆ. ಕೇಸ್ ದಾಖಲಾದ ದಿನ ದಿಂದ 30 ದಿನಗಳ ಒಳಗೆ ಹೇಳಿಕೆ ದಾಖಲಿಸಿಕೊಳ್ಳಬೇಕು ಹಾಗೂ ಅಪರಾಧ ನಡೆದಿದೆ ಎಂದು ತಿಳಿದ ದಿನದಿಂದ 1 ವರ್ಷದ ಅವಧಿಯ ಒಳಗಾಗಿ ವಿಚಾರಣೆ ಮುಗಿಸಬೇಕು ಈ ರೀತಿ ಕಾನೂನಿನಲ್ಲಿ ಇರುವುದರಿಂದ ಪೋಕ್ಸೋ ಕಾಯ್ದೆ ಬಗ್ಗೆ ತಮ್ಮ ಮಕ್ಕಳಿಗೆ ಹಾಗೂ ಅಕ್ಕಪಕ್ಕದ ಇತರರಿಗೆ ತಿಳಿಸಿ,

ಇತ್ತೀಚಿನ ದಿನಗಳಲ್ಲಿ ಜಾತಿ ಹೆಸರಿನಲ್ಲಿ ದೌರ್ಜನ್ಯ ಹೆಚ್ಚುತ್ತಿದ್ದು, ಇವುಗಳಿಗೆ ಕಾನೂನಿನಲ್ಲಿ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ,ನೈಸರ್ಗಿಕವಾಗಿ ದೊರೆಯುವ ಎಲ್ಲಾ ವಸ್ತು ಪಡೆಯಲು ಪ್ರತಿಯೊಬ್ಬರಿಗೂ ಹಕ್ಕು ಇದೆ. ಕೆರೆಕಟ್ಟೆ, ಬೀದಿ ನಲ್ಲಿ, ದೇವಸ್ಥಾನ, ಶಾಲೆ ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಪದ್ಧತಿ, ಮೇಲು ಕೀಳು ಎಂಬ ಭೇದಭಾವ ತೊರೆದು ಎಲ್ಲರೂ ಒಂದೇ ಎಂಬ ಸಮಾನತೆಯ ಮನೋಭಾವ ಹೊಂದಿರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಸಂತ, ಹಾಗೂ ನಿಸರ್ಗ ಟ್ರಸ್ಟ್ ನ ನಾಗರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ:ಆರ್ ಉಮೇಶ್ ಮಲಾರಪಾಳ್ಯ