ದೊಡ್ಡಬಳ್ಳಾಪುರ: ಸೋಮವಾರ ರಾತ್ರಿ ಸುಮಾರ 8 ಗಂಟೆ ವೇಳೆಯಲ್ಲಿ ತಾಲೂಕಿನ ಅರಳುಮಲ್ಲಿಗೆ-ಕುಂಟನಹಳ್ಳಿ ರಸ್ತೆಯಲ್ಲಿ ಬೈಕ್ ಸವಾರರಿಗೆ ಚಿರತೆ ಕಾಣಿಸಿದೆ.

ಬೈಕ್ ಸವಾರರು ಹುಸ್ಕೂರು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಚಿರತೆಯೊಂದು ಬೈಕ್ ಗೆ ಅಡ್ಡವಾಗಿ ಬಂದಿದೆ. ಈ ದೃಶ್ಯವನ್ನು ಬೈಕ್ ಸವಾರರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆ ಕಾಣಿಸಿಕೊಂಡ ಸ್ಥಳದಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಗಂಡ್ರಗೊಳ್ಳಿಪುರ ಅರಣ್ಯ ಪ್ರದೇಶವಿದ್ದು ಆ ಕಡೆಯಿಂದ ಚಿರತೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ಚಿರತೆ ಕುಂಟನಹಳ್ಳಿ ರಸ್ತೆಯಿಂದ ಅರಳುಮಲ್ಲಿಗೆ ಕೆರೆ ಕಡೆಗೆ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಾಮುತ್ತಾ ಗ್ರಾಮಗಳಲ್ಲಿ ಚಿರತೆ ಸಂಚಾರ ಮಾಡಿರುವುದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ನಂತರ ಸಾಸಲು ಹೋಬಳಿಯ ಕುಕ್ಕಲಹಳ್ಳಿ ಗ್ರಾಮದಲ್ಲಿ ಮೇಕೆಯನ್ನ ಹೊತ್ತೊಯ್ದು ಬಲಿ ಪಡೆದಿತ್ತು. ಇದರಿಂದ ತಾಲೂಕಿನ ಜನತೆ ಜೀವಭಯದಲ್ಲಿದ್ದು, ಕೂಡಲೇ ಚಿರತೆಗಳನ್ನ ಸೆರೆ ಹಿಡಿಯುವಂತೆ ಅರಣ್ಯ‌ ಇಲಾಖೆಗೆ ಒತ್ತಾಯಿಸಿದ್ದಾರೆ.