ತೂಬಗೆರೆಯ ಎಂಟು ಹಲಸು ತಳಿಗಳಿಗೆ ಪಿಪಿಎಫ್‌ಆರ್‌ಎ ಪೇಟೆಂಟ್ : ರೈತರಿಗೆ ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ

ದೊಡ್ಡಬಳ್ಳಾಪುರ: ಇಲ್ಲಿನ ತೂಬಗೆರೆ ಭಾಗದ ಎಂಟು ಹಲಸು ತಳಿಗಳಿಗೆ ರಾಷ್ಟ್ರಮಟ್ಟದಲ್ಲಿ ಪೇಟೆಂಟ್ ನೀಡಲಾಗಿದೆ . ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು  ಭಾ.ಕೃ.ಅ.ಪ – ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವರುಗಳ ಸಹಯೋಗದೊಂದಿಗೆ ರೈತರಿಗೆ “ಹಕ್ಕು ಸ್ವಾಮ್ಯ ಪ್ರಮಾಣಪತ್ರ  ವಿತರಣೆ ಮತ್ತು ಕೃಷಿ – ವಿಜ್ಞಾನಿಗಳೊಂದಿಗೆ” ಸಂವಾದ  ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು .

ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿಎಫ್‌ಆರ್‌ಎ) ದಿಂದ  ತೂಬಗೆರೆ ಸುತ್ತಮುತ್ತಲಿನ ಎಂಟು ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಹಕ್ಕು ಸ್ವಾಮ್ಯ (ಪೇಟೆಂಟ್)  ಪ್ರಮಾಣ ಪತ್ರವನ್ನು ವಿಶ್ರಾಂತ ಕುಲಪತಿ ನಾರಾಯಣ ಗೌಡ ವಿತರಿಸಿ ಮಾತನಾಡಿದರು ಹಲಸಿನ ಹಣ್ಣಿನ ಬಗ್ಗೆ ಕೆಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಲಸಿನ ಹಣ್ಣುಗಳಲ್ಲಿರುವ ಔಷಧೀಯ ಗುಣ, ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ಸಂಶೋಧನೆ ಮಾಡುತ್ತಿದೆ. ಸ್ಥಳೀಯವಾಗಿ ಹಲಸಿನ ಹಣ್ಣು  ಮೌಲ್ಯವರ್ಧನೆ, ಉತ್ಪನ್ನಗಳ ಕುರಿತ ಅರಿವಿಗೆ ಮೂಡಿಸುತ್ತಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಅಂಶಗಳಾದ, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಈಗ ಪೇಟೆಂಟ್ ಪಡೆದ ರೈತರು ತಮ್ಮ ತಳಿಗಳನ್ನು ಜವಾಬ್ದಾರಿಯಿಂದ ಸಂರಕ್ಷಿಸಬೇಕು ಎಂದರು.

ರೈತರಿಗಾಗಿ ‘ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ’ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹಚ್ಚುವ ಯಂತ್ರದ ಕುರಿತು ಜಿಕೆವಿಕೆ ವಿಜ್ಞಾನಿ ಡಾ ಶಾಮಲ ಮಾಹಿತಿ ನೀಡಿದರು.

ತೂಬಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ತೂಬಗೆರೆ ಸೇರಿದಂತೆ ತಾಲೂಕಿನಲ್ಲಿ 1 ಸಾವಿರ ಟನ್‌ ಹಲಸು ವಹಿವಾಟು ಆಗಿದೆ. ಯಾವುದೇ ರಸ್ತೆ ಪಕ್ಕ ನೋಡಿದರೂ ಹಲಸು ಕಾಣುತ್ತದೆ. ಬೆಂಗಳೂರು ಅಥವಾ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪ ಎಲ್ಲಾ ಸೌಲಭ್ಯ ಒಳಗೊಂಡಂತೆ ಹಲಸು ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದರು.

ಪಿಪಿಎಫ್‌ಆರ್‌ಎ ಪೇಟೆಂಟ್ ಪಡೆದ ಹಲಸು ಬೆಳೆಗಾರ ಕೃಷ್ಣಪ್ಪ ಮಾತಾನಾಡಿ, ನಮ್ಮ ಹೊಲದ ಹಲಸಿನ ಹಣ್ಣಿಗೆ ರಾಷ್ಟ್ರ ಮಟ್ಟದ ಮಾನ್ಯತೆ ನೀಡಿರುವುದು ಸಂತಸ ತಂದಿದೆ. ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆ ಯಾರೂ ಬೆಳೆಸಲು ಅವಕಾಶ ಸಿಗುವುದಿಲ್ಲ. ಹಣ್ಣಿನ ಮಾಲೀಕರು ಅನುಮತಿ ನೀಡಿದವರು ಮಾತ್ರ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಲು ಅವಕಾಶವಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಕ್ರಾಸ್ ನಲ್ಲಿರುವ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾ ಎ.ಸಿ ರವರಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಚಿಪ್ಸ್, ನಂತಹ ಉತ್ಪನ್ನಗಳ ಪ್ರದರ್ಶನ ಸಹ‌ ನೆಡೆಯಿತು.

ಕಾರ್ಯಕ್ರಮದಲ್ಲಿ ಜಿಕೆವಿಕೆ ವಿಜ್ಞಾನಿಗಳಾದ ಡಾ.ಹನುಮಂತರಾಯ, ಡಾ. ಬಾಬು ರೈ, ಡಾ. ಸವಿತಾ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ,  ಸದಸ್ಯ ಕೃಷ್ಣಪ್ಪ (ಕಿಟ್ಟಿ).ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಅಪ್ಪಯ್ಯಣ್ಣ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ತೂಬಗೆರೆ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಕೀಲ ಪ್ರತಾಪ್, ಮುಖಂಡರಾದ ವೆಂಕಟೇಶ್, ಕನಕದಾಸ,  ರವಿಸಿದ್ದಪ್ಪ, ಉದಯ ಆರಾಧ್ಯ, ವಾಸು, ರಂಗಪ್ಪ, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.