ಕಮಲ್ ಹಾಸನ್ ಹೇಳಿಕೆ ಖಂಡಿಸಿ ಡಾ. ರಾಜಕುಮಾರ್ ಅಭಿಮಾನಿ ಸಂಘದಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ: ಕಾರ್ಯಕ್ರಮವೊಂದರಲ್ಲಿ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು, ಕನ್ನಡಕ್ಕೆ ತಮಿಳು ತಾಯಿ ಇದ್ದಂತೆ ಎಂಬ ಕಮಲ್ ಹಾಸನ್ ರವರ ಹೇಳಿಕೆಯನ್ನು ಖಂಡಿಸಿ ದೊಡ್ಡಬಳ್ಳಾಪುರ ತಾಲೂಕು ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ಡಿ. ಕ್ರಾಸ್ ನ ಡಾ. ರಾಜಕುಮಾರ್ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಡಾ. ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸು. ನರಸಿಂಹಮೂರ್ತಿ ಮಾತನಾಡಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲಹಾಸನ್ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದೆ. ಚಿತ್ರರಂಗದಲ್ಲಿ ಕಮಲ್ ಉನ್ನತ ಸ್ಥಾನಕ್ಕೇರಲು ಕನ್ನಡಿಗರೂ ಸಹ ಕಾರಣ ಎಂಬುದನ್ನು ಕಮಲ್ ಮರೆತಂತಿದೆ. ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ. ಬೇರ್ಯಾವುದೇ ಭಾಷೆಯಿಂದಲೂ ಕನ್ನಡ ಬೆಳೆದಿಲ್ಲ ಕಮಲ್ ಹಾಸನ್ ಇದನ್ನು ಅರಿಯಬೇಕು. ತಮ್ಮ ಚಿತ್ರಕ್ಕೋಸ್ಕರ ತಮಿಳರ ಓಲೈಕೆಗೋಸ್ಕರ ಕನ್ನಡವನ್ನು ಕಡೆಗಣಿಸುವ ರೀತಿ ಮಾತನಾಡಿದ್ದು ಕನ್ನಡಿಗರು ಉಗ್ರವಾಗಿ ಖಂಡಿಸುತ್ತಾರೆ. ಈ ಕೂಡಲೇ ಕಮಲ್ ಹಾಸನ್ ತನ್ನ ತನ್ನ ಕನ್ನಡ ವಿರೋಧಿ ಹೇಳಿಕೆಯನ್ನು ವಾಪಾಸ್ ಪಡೆದು ಕನ್ನಡಿಗರ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕಮಲ್ ಚಿತ್ರಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ. ಎಂದ ನರಸಿಂಹಮೂರ್ತಿ ಈ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್ ಕೂಡಾ ಭಾಗಿಯಾಗಿದ್ದು ಕಮಲಹಾಸನ್ ಹೇಳಿಕೆಯನ್ನು ಖಂಡಿಸದೆ ತಾವೂ ಕೂಡ ತಮಿಳರ ಓಲೈಕೆಗಾಗಿ ತಮಿಳಿನಲ್ಲೇ ಮಾತನಾಡಿದ್ದು ನಮಗೆಲ್ಲ ಬೇಸರ ತರಿಸಿದೆ. ಹಿಂದೆ ಡಾ. ರಾಜಕುಮಾರ್ ತಮಿಳುನಾಡು ಹಾಗೂ ಆಂ ದ್ರದ ಕಾರ್ಯಕ್ರಮಗಳಿಗೆ ಹೋದಾಗ ಕನ್ನಡದಲ್ಲೇ ಮಾತನಾಡಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು ಇಂತದರಲ್ಲಿ ಶಿವರಾಜಕುಮಾರ ನಡೆ ಸರ್ವಥಾ ಸಾಧುವಲ್ಲ. ಈ ಬಗ್ಗೆ ಅಭಿಮಾನಿ ಸಂಘ ವಿಷಾದ ವ್ಯಕ್ತಪಡಿಸುತ್ತದೆ. ಮುಂದಿನ ದಿನಗಳಲ್ಲಿ ಕಮಲ್ ಕನ್ನಡಿಗರ ಕ್ಷಮೆ ಯಾಚಿಸದಿದ್ದರೆ ಕನ್ನಡಪರ ಸಂಘಟನೆಗಳ ಜೊತೆ ಗೂಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸುರೇಶ ರಾವ್, ಅಪ್ಪಿ ವೆಂಕಟೇಶ್, ಚಂದ್ರಣ್ಣ, ಶಿವಾಜಿರಾವ್, ಚೌಡರಾಜ್, ಗಳಗಲ ಮಂಜು, ಬಾಲರಾಜ್, ನಾಗಭೂಷಣ್, ರಮೇಶ್, ಮೂರ್ತಿ, ಸೇರಿದಂತೆ ಅನೇಕ ಅಭಿಮಾನಿ ಸಂಘದ ಸದಸ್ಯರು ಭಾಗವಹಿಸಿದ್ದರು.