ರೈತರ ಬಂಧನ ಖಂಡಿಸಿ ಪ್ರತಿಭಟನೆ : ರೈತರ ಭೂಮಿ ಉಳಿಸಿ ಎಂದ ಹೋರಾಟಗಾರರು

ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ದೇವನಹಳ್ಳಿ ರೈತ ಹೋರಾಟಗಾರರನ್ನು ದೌರ್ಜನ್ಯದಿಂದ ಬಂಧನ ಮಾಡಿರುವುದನ್ನು ವಿರೋಧಿಸಿ ಇಂದು ತಾಲೂಕು ಕಚೇರಿ ವೃತ್ತದಲ್ಲಿ ಸಿಐಟಿಯು, ಸಿಪಿಐ(ಎಂ) ಕೆ ಆರ್ ಎಸ್ ಪಕ್ಷ, ದಲಿತ ಹಾಗೂ ಪ್ರಗತಿಪರ ಚಿಂತಕರು , ಕನ್ನಡಪರ ಹೋರಾಟಗಾರರು ಪ್ರತಿಭಟನೆ ನೆಡೆಸಿದರು.

ರೈತರು ತಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆಗೆ ಮುಂದಾದರೆ ರಾಜ್ಯ ಸರ್ಕಾರ ತನ್ನ ಪೊಲೀಸ್ ಬಲವನ್ನು ಬಳಸುವ ಮೂಲಕ ರೈತರನ್ನು ಬಂಧನಕ್ಕೆ ಒಳಪಡಿಸಿದೆ ಇದು ಖಂಡನೀಯ ಎಂದು ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಕೆ ಐ ಎ ಡಿ ಬಿ ಎಂಬ ಮಧ್ಯವರ್ತಿ ಸಂಸ್ಥೆಯು ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಭೂಮಿಗಳನ್ನು ಕಸಿದುಕೊಳ್ಳುತ್ತಿದೆ . ರಾಜ್ಯದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಲು ರೈತರ ಫಲವತ್ತಾದ ಭೂಮಿಯ ಬೇಕೆ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಎಷ್ಟೋ ಬರಡು ಭೂಮಿ ಇದೆ ಆ ಭೂಮಿಯನ್ನು ಬಳಕೆ ಮಾಡುವ ಮುಖಾಂತರ ರಾಜ್ಯ ಸರ್ಕಾರವು ಆ ಭಾಗದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಆದರೆ ಇವರಿಗೆ ಬೆಂಗಳೂರು ಸುತ್ತಮುತ್ತ ಇರುವ ಫಲವತ್ತಾದ ಕೃಷಿ ಭೂಮಿಯೇ ಬೇಕು ಕಾರಣ ರಿಯಲ್ ಎಸ್ಟೇಟ್ ಮಾಫಿಯಾ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಹೇಳುವಂತೆ ನಿಜವಾಗಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರ ಇರುವುದೇ ಆದರೆ ಅಸಾಂವಿಧಾನಿಕವಾಗಿ ರೈತರ ಮೇಲೆ ಹಾಕಿರುವ ಕೇಸುಗಳನ್ನು ಈ ಕೂಡಲೇ ವಾಪಸ್ ಪಡೆಯಬೇಕು, ಕೆ ಐ ಎ ಡಿ ಬಿ ವಶಕ್ಕೆ ಪಡೆಯಲು ಮುಂದಾಗಿರುವ ಫಲವತ್ತಾದ ರೈತರ ಭೂಮಿಯನ್ನು ಉಳಿಸಲಿ ಎಂದರು.

ಪ್ರತಿಬನಟನೆಯಲ್ಲಿ ಪ್ರಾಂತ ರೈತಸಂಘದ ಆರ್‌.ಚಂದ್ರತೇಜಸ್ವಿ, ರಾಜ್ಯ ರೈತಸಂಘದ ಮುತ್ತೇಗೌಡ, ಕೆಆರ್‌ಎಸ್ ಪಕ್ಷದ ಶಿವಶಂಕರ್, ಕರವೇ ಕನ್ನಡಿಗರ ಬಣದ ಚಂದ್ರಶೇಖರ್, ಕರವೇ ಶಿವರಾಮೇಗೌಡರ ಬಣದ ಹಮಾಮ್ ವೆಂಕಟೇಶ್, ಪ್ರಜಾವಿಮೋಚನಾ ಸಮಿತಿಯ ರಾಜ್ಯ ಮುಖಂಡ ಗೂಳ್ಯ ಹನುಮಣ್ಣ, ಸಿಐಟಿಯು ಮುಖಂಡ ಪಿಎ.ವೆಂಕಟೇಶ್, ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ ಮುಖಂಡರಾದ ಚೌಡಪ್ಪ, ರಘುಕುಮಾರ್, ಚಾಂದ್ ಮುಂತಾದವರು ಉಪಸ್ಥಿತರಿದ್ದರು.