ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿರುವ ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಆಂದೋಲನ

ಬೆಂಗಳೂರು ಗ್ರಾ: ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿಗಳು ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಸೂಲಿಬೆಲೆ ಸೇರಿ 6 ಬಸ್ ನಿಲ್ದಾಣಗಳಲ್ಲಿ 18 ಆಹಾರ ಉದ್ದಿಮೆ ಮಳಿಗೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ 1 ನೋಟಿಸ್ ನೀಡಿ, 2000 ರೂ ದಂಡ ವಿಧಿಸಿ, ಆಹಾರ ಉದ್ಯಮದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸಿದರು.

ಆಹಾರ ಉದ್ದಿಮೆ ಸ್ಥಳದಲ್ಲಿ ಪರಿಸರ ನೈರ್ಮಲ್ಯವಾಗಿರಬೇಕು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ಸೂಚನೆ ನೀಡಿ ಕರಪತ್ರ ವಿತರಿಸಿ ಅರಿವು ಮೂಡಿಸಿದರು. ಈ ವಿಶೇಷ ಅಂದೋಲನದಲ್ಲಿ ಆಹಾರ ಸುರಕ್ಷತೆಯ ಅಂಕಿತಾಧಿಕಾರಿ ಡಾ. ಧರ್ಮೇಂದ್ರ.ಬಿ, ಹಾಗೂ ಆಹಾರ ಸುರಕ್ಷತಾಧಿಕಾರಿಗಳಾದ ಗೋವಿಂದರಾಜು, ನಾಗೇಶ, ಪ್ರವೀಣ್ ಭಾಗವಹಿಸಿದ್ದರು.