ಎಲ್. ಐ.ಸಿ ಕಚೇರಿಯಲ್ಲಿ 70ನೇ ಅದ್ದೂರಿ ಕನ್ನಡ ರಾಜ್ಯೋತ್ಸವ
ದೊಡ್ಡಬಳ್ಳಾಪುರ : ಭಾರತೀಯ ಜೀವ ವಿಮಾ ನಿಗಮ ದೊಡ್ಡಬಳ್ಳಾಪುರ ಮುಖ್ಯ ಶಾಖೆ ಯಲ್ಲಿ ನೆಲಮಂಗಲ, ದೇವನಹಳ್ಳಿ ಉಪ ಶಾಖೆ ಗಳೊಂದಿಗೆ 70 ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವನಹಳ್ಳಿ ಶಾಖಾಧಿಕಾರಿ ನರಸಿಂಹಪ್ಪ ವಹಿಸಿದ್ದು ಮುಖ್ಯ ಭಾಷಣಕಾರರಾಗಿ ನವೋದಯ ಶಾಲೆಯ ನಿವೃತ್ತ ಉಪನ್ಯಾಸಕರಾದ ವಿ ಎಸ್ ಹೆಗ್ಗಡೆ ಭಾಗವಸಿ ಮಾತನಾಡಿದರು. ಭಾರತೀಯ ಜೀವ ವಿಮಾ ನಿಗಮ ಭಾರತ ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲಾ ರಾಜ್ಯಗಳಿಂದ ಸಾವಿರಾರು ನೌಕರರು ಸೇವೆ ಸಲ್ಲಿಸಲು ಬರುತ್ತಿದ್ದಾರೆ. ನಮ್ಮಲ್ಲಿ ಕಳೆದ 35 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಕನ್ನಡದ ಅಸ್ಮಿತೆ ಕಾಪಾಡಿಕೊಂಡು ಇದುವರೆವಿಗೂ ಒಂದು ಸಣ್ಣ ಘರ್ಷಣೆ ಇಲ್ಲದೆ ಎಲ್ಲರಿಗೂ ಕನ್ನಡ ಕಲಿಸಿ ಕಳುಹಿಸಿರುವುದು ಈ ಶಾಖೆಯ ಹೆಗ್ಗಳಿಕೆ ಎಂದರು.
ವಿ ಎಸ್ ಹೆಗ್ಗಡೆ ಯವರು ಮಾತನಾಡಿ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿದಿಲ್ಲ ಅದು ನಮ್ಮ ಉಸಿರಾಗಿದೆ. ಇಂದಿನ ಯುವ ಪೀಳಿಗೆ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು ಅವರಲ್ಲಿ ಭಾಷಾಭಿಮಾನ ಬೆಳೆಸುವ ಕಾರ್ಯಕ್ರಮಗಳು ರೂಪುಗೊಳ್ಳಬೇಕಿದೆ. ವ್ಯವಹಾರಕ್ಕಾಗಿ ಅನ್ಯ ಭಾಷೆಗಳ ಅಗತ್ಯವಿದೆ ಆದರೆ ಜೀವನ ಭಾಷೆಯಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿ ಕನ್ನಡಿಗರ ಮೇಲಿದೆ ಎಂದರು .
ಕಾರ್ಯಕ್ರಮ ದಲ್ಲಿ ನೆಲಮಂಗಲ ಶಾಖಾಧಿಕಾರಿ ಭಾರ್ಗವ್, ಉಪಶಾಖಾಧಿಕಾರಿ ನಾಗಮುರಳೀಧರ್ , ಅಭಿವೃದ್ದಿ ಅಧಿಕಾರಿ ನರೇಂದ್ರ ಕುಮಾರ್, ಆಡಳಿತ ಅಧಿಕಾರಿ ವೆಂಕಟರಮಣಪ್ಪ,ಸೌತ್ ಸೆಂಟ್ರಲ್ ಜೋನ್ ಜಂಟಿ ಕಾರ್ಯದರ್ಶಿ ಆರ್ ಎಸ್ ನಾಯಕ್, ಕರವೇ ರಾಜ್ಯ ಕಾರ್ಯದರ್ಶಿ ರವಿ ರಾಜಘಟ್ಟ, ಪ್ರತಿನಿಧಿ ಸಂಘದ ಮಾಜಿ ಅಧ್ಯಕ್ಷ ಟಿ ಜಿ ಮಂಜುನಾಥ್, ಕಾರ್ಯದರ್ಶಿ ಟಿ.ಕೆ. ಶ್ರೀನಿವಾಸ್, ಖಜಾಂಚಿ ಎಂ ಎಲ್ ನಾರಾಯಣಸ್ವಾಮಿ ಮುಂತಾದವರು ಬಾಗವಹಿಸಿದ್ದರು.





