ನೇಕಾರರು ಉತ್ಪಾದಿಸಿದ ಸಾಂಪ್ರದಾಯಿಕ ಸೀರೆಗಳನ್ನು ಸರ್ಕಾರಗಳು ಖರೀದಿ ಮಾಡಲಿ – ಪಿ ಎ ವೆಂಕಟೇಶ್
ದೊಡ್ಡಬಳ್ಳಾಪುರ : ಲಾಳಿ ರಹಿತ ರೇಪಿಯರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಇದಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸುವ ಮೂಲಕ ಗುಡಿ ಕೈಗಾರಿಕೆಯಾದ ನೇಕಾರಿಕೆ ಉಳಿಸಬೇಕು ಮತ್ತು ನೇಕಾರರು ಉತ್ಪಾದಿಸಿದ ಸಾಂಪ್ರದಾಯಿಕ ಸೀರೆಗಳನ್ನು ಸರ್ಕಾರಗಳು ಖರೀದಿ ಮಾಡುವ ಮೂಲಕ ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿರುವ ನೇಕಾರರನ್ನು ಉಳಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಪಿ.ಎ. ವೆಂಕಟೇಶ್
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ನೇಕಾರರ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕಾಯ್ದೆಗಳನ್ನು ರೂಪಿಸುವ ಮೂಲಕ ನೇಕಾರಿಕೆ ಉಳಿಸಬೇಕಿದೆ .ಜೊತೆಗೆ ಲಾಳಿ ಸಹಿತ ವಿದ್ಯುತ್ ಮಗ್ಗಗಳ ಮೀಸಲಾತಿ (ರಿಜರ್ವೇಶನ್) ಅಧಿನಿಯಮ ರೂಪಿಸುವ ಮೂಲಕ ನೇಕಾರಿಕೆ ಉದ್ಯಮವನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ನೇಕಾರಿಕೆ ಹಾಗೂ ನೇಕಾರರ ಸಮಗ್ರ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಣೆಯ ಸಮರ್ಪಕ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಅಧ್ಯಯನ ಸಮಿತಿ ರಚಿಸುವ ಮೂಲಕ ಸರ್ಕಾರವು ವರದಿ ಪಡೆದು ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದರು.
ಈ ವೇಳೆ ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ದೊಡ್ಡಬಳ್ಳಾಪುರ ತಾಲೂಕು ಎಲ್ಲಾ ನೇಕಾರ ಸಂಘಟನೆಗಳು, ಮತ್ತು ನೇಕಾರ ಸಹಕಾರ ಸಂಘಗಳು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೇಕಾರ ಸಂಘಟನೆಗಳ ಮುಖಂಡರು, ಸರ್ವ ಪಕ್ಷಗಳ ಮುಖಂಡರು, ಜವಳಿ ಉದ್ಯಮದ ತಜ್ಞರು, ಜನಪ್ರತಿನಿಧಿಗಳು ಹಾಜರಿದ್ದರು.





