ಬಾಲ್ಯ ವಿವಾಹ ಶಿಕ್ಷಾರ್ಹ, ಅಪರಾಧ. ಪ್ರೋತ್ಸಾಹಿಸುವವರ ಮೇಲೆ ಕಾನೂನು ಕ್ರಮದ ಎಚ್ಚರಿಕೆ.
ವಿಜಯಪುರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವತಿಯಿಂದ ಪಟ್ಟಣದ ಪುರಸಭೆಯ ಆವರಣದಲ್ಲಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಪುರಸಭೆ ಆರೋಗ್ಯ ನಿರೀಕ್ಷಕಿ ಲಾವಣ್ಯ ಅವರು, ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ. ಬಾಲ್ಯ ವಿವಾಹ ಪದ್ಧತಿಯು ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿದ್ದು ಕುಟುಂಬ, ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮಾಡುವುದರಿಂದ ಅತಿ ಚಿಕ್ಕ ವಯಸ್ಸಿನಲ್ಲಿ ಗರ್ಭಧರಿಸುವುದರಿಂದ ಆಕೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತಹೀನತೆ ನಿಶಕ್ತಿ ಉಂಟಾಗಿ ಗರ್ಭಪಾತವಾಗುವುದು ಹೆಚ್ಚಾಗುತ್ತದೆ.
ಬಾಲ್ಯವಿವಾಹದಿಂದ ಅಂಗವಿಕಲ, ಬುದ್ದಿಮಾಂಧ್ಯ ಹಾಗೂ ರಕ್ತಹೀನವುಳ್ಳ ಮಗು ಹುಟ್ಟುತ್ತದೆ. ಇದರಿಂದ ಹೆಣ್ಣಿನ ದೈಹಕ ಸಾಥ್ರ್ಯ ಕುಂಠಿತವಾಗುತ್ತದೆ. ಶಿಶುಮರಣ, ತಾಯಿ ಮರಣ ಹೆಚ್ಚಾಗುತ್ತದೆ. ಈ ಅನಿಷ್ಟ ಪದ್ಧತಿ ಜಾರಿಯಲ್ಲಿರಲು ಲಿಂಗತಾರತಮ್ಯ, ಬಡತನ, ಆರ್ಥಿಕ ಪರಿಸ್ಥಿತಿ, ಮೂಢನಂಬಿಕೆ ಹಾಗೂ ಅನಕ್ಷರತೆ ಮುಖ್ಯವಾಗಿವೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ಸಾಮಾಜಿಕ ಪಿಡುಗುಗಳಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲ್ಯ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2016 ರಡಿ ಶಿಕ್ಷೆಯಾಗಲಿದೆ. ಎಲ್ಲಾ ಮಕ್ಕಳನ್ನು ಕನಿಷ್ಟ ಪದವಿಯವರೆಗೆ ವಿದ್ಯಾಭ್ಯಾಸ ನೀಡಿ ಎಂದು ಅರಿವು ಮೂಡಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಲಿಂಗಣ್ಣ, ಪೂರ್ಣಿಮಾ, ಹೇಮಾವತಿ, ಜನಾರ್ಧನ, ವೆಂಕಟರತ್ನಮ್ಮ, ಶಾರದಮ್ಮ ಮುಂತಾದವರು ಹಾಜರಿದ್ದರು.





