ಅಂತ್ಯ ಕ್ರಿಯೆ ಮಾಡಲು ಸ್ಮಶಾನಭೂಮಿ ಇಲ್ಲದೆ ಗ್ರಾಮಸ್ಥರ ಪರದಾಟ
ದೊಡ್ಡಬಳ್ಳಾಪುರ: ಮೃತದೇಹ ಅಂತ್ಯಕ್ರಿಯೆ ಮಾಡಲು ಸ್ಮಶಾನ ಭೂಮಿ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಘಟನೆ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕಳೆದ ಐದು ತಲೆಮಾರುಗಳಿಂದ ಮೃತಪಟ್ಟವರನ್ನು ಸರ್ವೇ ನಂಬರ್ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಆದರೆ, ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಹಿಂದೆ ಸ್ಮಶಾನ ಕೆಡವಿದಾಗ ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಈವರೆಗೆ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿರಲಿಲ್ಲ.
ಶುಕ್ರವಾರ ಗ್ರಾಮದ ದೇವರಾಜ್(40) ಎಂಬುವರು ಮೃತಪಟ್ಟಿದ್ದು, ಅಂತ್ಯಕ್ರಿಯೆ ನಡೆಸಲು ಸ್ಥಳವಿಲ್ಲದೆ ಶವವನ್ನು ತಾಲೂಕು ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದರು. ಪಾರ್ಥೀವ ಶವ ಕೊಂಡೊಯ್ಯಲು ಅಂಬುಲೆನ್ಸ್ ಕೂಡ ಬಂದಿತು.
ವಿಷಯ ತಿಳಿದ ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ಪಿ.ರವಿ. ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮಾಪತಿ ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಅಂಬುಲೆನ್ಸ್ ತಡೆದರು.
ಈ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗ್ರಾಮಸ್ಥರು, ನಮಗೆ ನಮ್ಮ ಪೂರ್ವಿಕರನ್ನು ಅಂತ್ಯಸಂಸ್ಕಾರ ಮಾಡಿದ ಜಾಗವನ್ನೇ ನೀಡಬೇಕು, ಅಲ್ಲಿ ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಇದೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಗ್ರಾಮಸ್ಥರನ್ನು ಮನವೊಲಿಸುವ ಕಾರ್ಯ ಮುಂದುವರಿದಿದೆ.