ಇ. ಎಸ್. ಐ. ಆಸ್ಪತ್ರೆ ಉದ್ಘಾಟನೆ ವಿಳಂಬವಾದರೆ ಉಗ್ರ ಹೋರಾಟ… ಪಿ. ಎ. ವೆಂಕಟೇಶ್

ದೊಡ್ಡಬಳ್ಳಾಪುರ:ರಾಜ್ಯ ಕೂಲಿ ಕಾರ್ಮಿಕರಿಗಾಗಿ ನೂರಾರು ಕೋಟಿ ವೆಚ್ಚ ನಿರ್ಮಾಣವಾದ ಇ ಎಸ್ ಐ ಅಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಸುಮಾರು ತಿಂಗಳು ಕಳೆದಿದೆ ಅದನ್ನು ಉದ್ಘಾಟನೆ ಮಾಡದೆ
ಹೋದರೆ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಮುಖಂಡ ಪಿಎ.ವೆಂಕಟೇಶ್ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಬಸವೇಶ್ವರ (ತಾಲ್ಲೂಕು ಕಚೇರಿ) ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದ (ಸಿಪಿಐಎಂ) ಪಕ್ಷದ ವತಿಯಿಂದ ನಡೆದ 9ನೇ ತಾಲ್ಲೂಕು ಸಮ್ಮೇಳನ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಯಾವ ವಿಚಾರಗಳನ್ನು ಮುಂದೆ ಮಾಡುತ್ತಾರೆ ಎಂಬುದು ಮುಖ್ಯವಾಗಬೇಕು. ಈ ಬಂಡವಾಶಾಹಿ ರಾಜಕೀಯ ಪಕ್ಷಗಳು ಜನರ ಪರವಾಗಿಲ್ಲ. ಜನರನ್ನು ಮನುಷ್ಯರಾಗಿ ಕಾಣುತ್ತಿಲ್ಲ, ಅವರನ್ನ ಮತದ ಯಂತ್ರವಾಗಿ ನೋಡುತ್ತಿದ್ದಾರೆ, ಅವರಿಗೆ ಕೇವಲ ನಮ್ಮ ಮತ ಮಾತ್ರ ಬೇಕು ಸಮಸ್ಯೆಗಳು ಬೇಕಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ನಾವು ದೊಡ್ಡಬಳ್ಳಾಪುರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ, ಅದನ್ನು ಇಂದಿನ ಸಮ್ಮೇಳನದ ಸಭೆಯಲ್ಲಿ ಮಂಡಿಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ಸಿದ್ದ ಮಾಡುತ್ತೇವೆ ಎಂದರು.

ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲಂಚವಿಲ್ಲದೆ ತಾಲ್ಲೂಕು ಕಚೇರಿ, ಕಂದಾಯ ಇಲಾಖೆ, ಪಂಚಾಯತಿಗಳಲ್ಲಿ ಕಾಸಿಲ್ಲದೆ ಕೆಲಸ ಆಗುತ್ತೆ ಎಂದರೆ ನಗಬೇಕಾದ ವಾತಾವಾರಣ ನಿರ್ಮಾಣವಾಗಿದೆ. ಇ ಖಾತೆಗೆ ಮಾಡಿಸಲು ಗ್ರಮಾ ಪಂಚಾಯಿಗರ 20 ಸಾವಿರ. ನಗರಾಭೆಯಾದರೆ 40 ಸಾವಿರ ಕೊಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಈ ರೀತಿಯ ಭ್ರಷ್ಟಾಚಾರದ ವಿಚಾರಗಳನ್ನ ಚುನಾವಣಾ ಸಂದರ್ಭದಲ್ಲಿ ಕೇಳುವುದಿಲ್ಲ, ನಮ್ಮನ್ನಾಳುವ ಜನ ಪ್ರತಿನಿಧಿಗಳು ಏನು ಮಾಡ್ತಿದಾರೆ ಎಂಬ ಬಗ್ಗೆ ನಾವು ಚಕಾರ ಎತ್ತುವುದಿಲ್ಲ. ಸಿಪಿಐಎಂ ಪಕ್ಷ ಜನರ ಮುಂದೆ ಹೋದರೆ ಓಟಿಗೆ ಎಷ್ಟು ಕೊಡ್ತೀರಿ ಎಂದು ಕೇಳುವ ಪರಿಸ್ಥಿತಿಯನ್ನ ಈ ಮೂರೂ ಬಂಡವಾಳಶಾಹಿ ಪಕ್ಷಗಳು ನಿರ್ಮಾಣ ಮಾಡಿವೆ. ನಗರದ ರಸ್ತೆಗಳು ಗುಂಡಿ ಬಿದ್ದಿವೆ. ರೇಷನ್ ಕಾರ್ಡ್ ರದ್ದಾಗಿವೆ. ಈ ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಬೇಕಿಲ್ಲ. ಚುನಾವಣೆ ಸಂದರ್ಭದಲ್ಲಿ ಹಣ ಖರ್ಚು ಮಾಡಿ ಅದನ್ನ ಮತ್ತೆ ಸುಲಿಗೆ ಮಾಡ್ತಾರೆ ಎಂದು ಆರೋಪಿಸಿದರು.

ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ರೈತರು ಮತ್ತು ನೇಕಾರರ ಬಾಯಿಗೆ ತುಪ್ಪ ಸವರುತ್ತಾರೆ. ರಾಜ್ಯದಲ್ಲಿ 51 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ದೊಡ್ಡಬಳ್ಳಾಪುರದಲ್ಲೂ ಒಬ್ಬರು ನೇಣು ಬಿಗಿದುಕೊಂಡರು. ಟೆಕ್ಸ್‌ಟೈಲ್ ನೀತಿ ಬಂಡವಾಳಶಾಹಿಗಳ ಪರವಾಗಿ ತರುತ್ತಾರೆ ಈ ನೇಕಾರ ವಿರೋಧಿ ನೀತಿಗಳಿಂದ ನೇಕಾರರು ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದರು.

ತಾಲೂಕಿನ ನೇಯ್ಗೆ ಉದ್ಯಮ ರಾಜ್ಯದಲ್ಲಿ ಹೆಸರು ಮಾಡಿದೆ. ಸುಮಾರು 35 ಸಾವಿರ ವಿದ್ಯುತ್ ಮಗ್ಗಗಳಿವೆ, ಕೃಷಿಕರು, ನೇಕಾರರು ಇಲ್ಲಿ ವಾಸ ಮಾಡುತ್ತಿದ್ದಾರೆ, ಬಾಶೆಟ್ಟಿಹಳ್ಳಿ ಕಾರ್ಖಾನೆ ವಲಯದಲ್ಲಿ ಸಹಸ್ರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಇಡೀ ರಾಜ್ಯದಲ್ಲೇ ಅತಿ ಹೆಚ್ಚು ನೇಕಾರರು ತಾಲೂಕಿನಲ್ಲಿ ಇದ್ದಾರೆ. ಕಟ್ಟಡ ಕಾರ್ಮಿಕ ನೀಡುತ್ತಿರುವ 19 ಬಗೆಯ ಸೌಲಭ್ಯಗಳನ್ನು ನೇಕಾರರಿಗೂ ಕೊಡಬೇಕು ಎಂದು ಕೋವಿಡ್ ಸಂದರ್ಭದಲ್ಲಿ ನಾವು ಮಾಡಿದ ಹೋರಾಟದ ಫಲವಾಗಿ ಇಂದು ಸರ್ಕಾರ ನೇಕಾರರಿಗೆ ಐದು ಸಾವಿರ ಕೊಡುತ್ತಿದೆ ಎಂದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ಐವತ್ತು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿದ್ದ 29 ಕಾಯ್ದೆಗಳನ್ನು 4 ಕೋಡ್‌ಗಳಾಗಿ ರೂಪಾಂತರಗೊಳಿಸಿ ಮಾಲಿಕರ ಪರವಾದ ಕೋಡ್ ಆಗಿ ಬದಲಾಯಿಸಿದ್ದಾರೆ. ಕಾರ್ಮಿಕರನ್ನು ಯಾವುದೇ ಸಂದರ್ಭದಲ್ಲಿ ಮಾಲಿಕ ಬಳಸಿ ಬಿಸಾಡಬಹುದು. 12 ಗಂಟೆ ಕೆಲಸ, ಫಿ ಎಫ್, ಇಎಸ್ಐ ಬಗ್ಗೆ ಕಾರ್ಮಿಕನ‌ ಮೇಲೆ ನಡೆಯುವ ಶೋಷಣೆ ದಬ್ಬಾಳಿಕೆಯ ಬಗ್ಗೆ ಪ್ರಶ್ನೆ ಮಾಡಿದರೆ ಒಂದು ನೋಟೀಸ್ ನೀಡದೆ ಕಿತ್ತು ಹಾಕಬಹುದಾಗಿದೆ ಇದು ಕಾರ್ಮಿಕ ವಿರೋಧಿ ಸರ್ಕಾರದ ಜನಪರ ಕೆಲಸ ಎಂದು ವ್ಯಂಗ್ಯ ಮಾಡಿದರು , ಬಂಡವಾಳಶಾಹಿ ಪಕ್ಷಗಳು ಬಂಡವಾಳಶಾಹಿಗಳ ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತವೆ ಎಂದರು.

ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ 3ಲಕ್ಷ ಕೋಟಿ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ನಮ್ಮ ಬೇಡಿಕೆಗಳು ಈಡೇರಬೇಕಾದರೆ ಹತ್ತಾರು ವರ್ಷಗಳು ಹೋರಾಟ ಮಾಡಬೇಕು, ಹೋರಾಟ ಮಾಡದೆ ಯಾವುದೇ ಹಕ್ಕುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಬಾಶೆಟ್ಟಿಹಳ್ಳಿಯ ಮೂರನೇ ಹಂತದ ಕೈಗಾರಿಕಾ ಪ್ರದೇಶವಾದ ಅರೆಹಳ್ಳಿ-ಗುಡ್ಡದಹಳ್ಳಿಯಲ್ಲಿ ಹತ್ತು ವರ್ಷಗಳ ಹಿಂದೆ ಹತ್ತಾರು ತಿಂಗಳು ಹೋರಾಟ ಮಾಡಿದ ಫಲವಾಗಿ ಇಎಸ್ಐ ಆಸ್ಪತ್ರೆ ಮಂಜೂರು ಆಯ್ತು 85 ಕೋಟಿ ಬಿಡುಗಡೆ ಆಯ್ತು. ಅದು ಸರ್ಕಾರದ ಹಣವಲ್ಲ ಅದು ನಮ್ಮ ಕಾರ್ಮಿಕರ ಹಣ ಎಂದರು.

ಹನ್ನೊಂದು ವರ್ಷಗಳ ಹಿಂದೆ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಬಂದು ಇಎಸ್ಐ ಆಸ್ಫತ್ರೆಗೆ ಶಂಕು ಸ್ಥಾಪನೆ ಮಾಡಿ ಎರಡು ವರ್ಷದಲ್ಲಿ ಉದ್ಘಾಟನೆ ಮಾಡ್ತೀವಿ ಎಂದರು ಆದರೆ, ಆಸ್ಫತ್ರೆ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳು ಕಳೆದಿವೆ. ರಾಜಕೀಯ ಕಾರಣದಿಂದ ಉದ್ಘಾಟನೆ ಗೊಳ್ಳದೆ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಪಾಳು ಬೀಳುತ್ತಿದೆ ಇದು ಆಳುವ ವರ್ಗದ ಕಾರ್ಮಿಕ ವಿರೋಧಿಯಾಗಿದೆ. ಇನ್ನೊಂದು ಎರಡು ತಿಂಗಳಲ್ಲಿ ಉದ್ಘಾಟನೆ ಮಾಡದೆ ಇದ್ದರೆ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಗೋಪಾಲ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ ಮುಖಂಡರಾದ ರೇಣುಕಾರಾಧ್ಯ, ರಘುಕುಮಾರ್, ಚೌಡಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.