ಮಹಿಳೆ ಕೊಲೆ-ರಕ್ಷಣೆ ನೀಡಲು ವಿಫಲ.ಪಿಐ ರಾಜೇಶ್ ಎಎಸ್ಐ ವಿಶ್ವ ಅಮಾನತು

ಚಾಮರಾಜನಗರ:ಜೂ4 ಪಟ್ಟಣ ಠಾಣೆ ಪಿಐ ರಾಜೇಶ್ ಮತ್ತು ಎಎಸ್ಐ ವಿಶ್ವ ರನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಅಮಾನತು ಮಾಡಿದ್ದಾರೆ.

*ಮಹಿಳೆಗೆ ರಕ್ಷಣೆ ನೀಡಲು ವಿಫಲ*

ಮಂಗಳವಾರ ಗಂಡ ಹೆಂಡತಿ ಜಗಳದ ಹಿನ್ನೆಲೆ ಗಂಡ ಸೋಮವಾರ ಪೇಟೆ ಬಡಾವಣೆಯ ಗಿರೀಶ ಎಂಬಾತ ತನ್ನ ಹೆಂಡತಿ ವಿದ್ಯಾ ಎಂಬಾಕೆಯನ್ನು ಪಟ್ಟಣ ಠಾಣೆ ಎದುರೇ ಹಾಡು ಹಗಲೇ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಸಾಂತ್ವನ ಕೇಂದ್ರ ಸ್ವಾಧಾರ ಗೃಹದಲ್ಲಿದ್ದ ವಿದ್ಯಾಳಿಗೆ ಗಿರೀಶ ಕೊಲೆ ಬೆದರಿಕೆ ಹಾಕಿದ್ದ. ಆಕೆ ಮಂಗಳವಾರ ಸಾಂತ್ವಾನ ಕೇಂದ್ರದ ಸಿಬ್ಬಂದಿ ಜೊತೆ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಪೋಲಿಸರು ಎಫ್ಐಆರ್ ದಾಖಲಿಸಿ ಗಿರೀಶನನ್ನು ಬಂಧಿಸಿ ಜೈಲಿಗೆ ಅಟ್ಟಬೇಕಾಗಿತ್ತು. ಬದಲಿಗೆ ಆತನನ್ನು ಠಾಣೆಗೆ ಕರೆಸಿ ಅಸಂಜ್ಞೆಯ ಪ್ರಕರಣ ಮಾಡಿ ನಾಗರೀಕ ಸೇವೆಗಳ ಖಾತರಿ ಕಾಯ್ದೆಯಡಿ (ಜಿಎಸ್ ಸಿ)ಆಕೆಯ ತಂಟೆಗೆ ಹೋಗದಂತೆ ತಿಳುವಳಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ. ಸಾಂತ್ವಾನ ಕೇಂದ್ರದವರನ್ನು ಮೊದಲೇ ಕಳುಹಿಸಿದ್ದರು. ಸ್ವಲ್ಪ ಸಮಯದ ನಂತರ ವಿದ್ಯಾಳನ್ನು ಯಾವುದೇ ರಕ್ಷಣೆ ನೀಡದೆ ಒಬ್ಬಾಕೆಯನ್ನೇ ಕಳುಹಿಸಿದ್ದಾರೆ. ಆಕೆ ಠಾಣೆಯಿಂದ ಹೊರಬರುವುದನ್ನೇ ಕಾದಿದ್ದ ಗಿರೀಶ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ‌. ತನಗೆ ಗಂಡನಿಂದ ಕೊಲೆ ಬೆದರಿಕೆ ಇದೆ ಎಂದು ದೂರು ನೀಡಲು ಬಂದಿದ್ದ ಮಹಿಳೆಗೆ ರಕ್ಷಣೆ ನೀಡಲು,ನ್ಯಾಯ ಒದಗಿಸಲು ಪಿಐ ರಾಜೇಶ್,ಎಎಸ್ಐ ವಿಶ್ವ ಸಂಪೂರ್ಣ ವಿಫಲರಾಗಿದ್ದರಿಂದಲೇ ಕೊಲೆ ಆಗಿದೆ ಎಂದು ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿದ್ದಾರೆ. ಬೋರಲಿಂಗಯ್ಯ ಕೊಲೆ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ಬಂದು ಕೊಲೆ ನಡೆದ ಸ್ಥಳ ಪರಿಶೀಲನೆ ಮಾಡಿ ವಿಚಾರಣೆ ನಡೆಸಿ ಲೋಪ ಎಸಗಿರುವುದು ಕಂಡು ಬಂದಿದ್ದರಿಂದ ಅಮಾನತು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಮೇಗಲ ನಾಯಕರ ಬೀದಿಯಲ್ಲಿ ನಡೆದ ಜಗಳದಿಂದ ಉಂಟಾದ ಬಿಗುವಿನ ವಾತಾವರಣದ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರದಿ: ಆರ್ ಉಮೇಶ್ ಮಲಾರಪಾಳ್ಯ