ಸೂರು ಕಳೆದಕೊಂಡು ಬೀದಿಗೆ ಬಂದ ತಾಯಿ-ಮಕ್ಕಳು : ಬಡ ಕುಟುಂಬಕ್ಕೆ ಬೇಕಿದೆ ಸಹೃದಯಿಗಳ ಸಹಾಯ

ದೊಡ್ಡಬಳ್ಳಾಪುರ: ಸರ್ಕಾರ ಬಡತನ ನಿರ್ಮೂಲನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಸರ್ವರಿಗೂ ಸೂರು ಇರಬೇಕು ಎಂದು ಹಲವಾರು ವಸತಿ ಯೋಜನೆಗಳನ್ನು ರೂಪಿಸಿದೆ. ಯಾರೂ ಸಹ ಹಸಿವಿನಿಂದ ಸಾಯಬಾರದು ಎಂದು ಆಹಾರ ಭದ್ರತಾ ಕಾಯ್ದೆ ಮುಂತಾದ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ.

ಆದರೆ, ಇಲ್ಲೊಂದು ಕಡು ಬಡ ಕುಟುಂಬ ಮಕ್ಕಳಿಗೆ ಒಂದು ಹೊತ್ತು ಊಟ ಹಾಕಲು ಪರದಾಡಬೇಕಾದ ಸಂಕಷ್ಟದಲ್ಲಿದೆ. ವಾಸಿಸುತ್ತಿದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿದೆ. ಮೊದಲೇ ಕಿತ್ತು ತಿನ್ನುವ ಬಡತನ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಆ ಬಡ ಕುಟುಂಬ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿತ್ತು. ಇದೆಲ್ಲದರ ಜೊತೆಗೆ ಮತ್ತೊಂದು ದೊಡ್ಡ ಸಮಸ್ಯೆ ಸಿಡಿಲು ಬಡಿದಂತೆ ಎರಗಿತು, ಇದ್ದ ಸೂರು ಬೆಂಕಿಗಾಹುತಿಯಾಗಿ ಇಡೀ ಕುಟುಂಬ ಬೀದಿಗೆ ಬಿದ್ದಿದೆ.

ಕಷ್ಟನೋ ಸುಖನೋ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದ ಮಹಿಳೆಯನ್ನು ಮನೆಗೆ ಬಿದ್ದ ಬೆಂಕಿ ತಾಯಿ ಮಕ್ಕಳನ್ನು ಏಕಾಏಕಿ ಬೀದಿಗೆ ನಿಲ್ಲುವಂತೆ ಮಾಡಿದೆ.

ಏನಿದು ಕರಣಾಜನಕ ಕತೆ:

ಹೌದು, ಹೀಗೆ ಸುಟ್ಟ ಮನೆ, ಮಾಸಿದ ಹಳೇ ಬಟ್ಟೆಯಲ್ಲೇ ನಿಂತಿರುವ ಮಕ್ಕಳು, ಮಕ್ಕಳಿಗೆ ಹೊಟ್ಟೆ ತುಂಬಿಸಲು ಆಗದ ಪರಿಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿರುವ ಮಹಿಳೆ, ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪಂಚಾಯತಿಯ ಭಕ್ತರಹಳ್ಳಿ ಗ್ರಾಮದಲ್ಲಿ. ಲಲಿತಾ ಬಾಯಿ ಎಂಬ ದಲಿತ ಮಹಿಳೆ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. 3 ಹೆಣ್ಣು ಮಕ್ಕಳು, 2 ಗಂಡು ಮಕ್ಕಳು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಈಕೆಯ ಪತಿ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಇದ್ದ ಒಂದು‌ ಹಳೆಯ ಹಂಚಿನ ಮನೆಯಲ್ಲಿ ಮಕ್ಕಳನ್ನು‌ ಸಾಕಿಕೊಂಡಿದ್ದಳು.

ಲಲಿತಾ ಬಾಯಿ ಎಂದಿನಂತೆ ಬೆಳಗ್ಗೆ ಎದ್ದು ಕೂಲಿಗೆ ಹೋಗಿದ್ದಾಳೆ. ಮಕ್ಕಳು ಮಧ್ಯಾಹ್ನದ ಬಿಸಿ ಊಟ ತಿನ್ನಲು ಶಾಲೆ ಬಳಿ ತೆರಳಿದ್ದರು. ಸಂಜೆ ಕೂಲಿ ಮುಗಿಸಿ ಮನೆಗೆ ಬಂದ ಲಲಿತಾ ಬಾಯಿಗೆ ಬರಸಿಡಿಲು ಬಡಿದಂತಾಗಿದೆ.

ಮನೆಗೆ ಬೆಂಕಿ ಬಿದ್ದು ಮನೆಯಲ್ಲಿ ಇದ್ದ ರಾಗಿ, ಅಕ್ಕಿ, ಅಡುಗೆ ಸಾಮಗ್ರಿಗಳ ಜೊತೆಯಲ್ಲಿ ಬೀರು, ಚೇರ್ ಎಲ್ಲವೂ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿ ಆಗಿವೆ. ಬೆಂಕಿ ಸಂಪೂರ್ಣವಾಗಿ ಮನೆಯ ತುಂಬೆಲ್ಲಾ ಆವರಿಸಿದ ಕಾರಣ, ಹಂಚಿಗೆ ಹಾಕಿದ್ದ ಮರದ ದಿಮ್ಮಿಗಳೂ ಸಹ ಸಂಪೂರ್ಣ ಸುಟ್ಟು ಹೋಗಿವೆ. ಅಲ್ಲದೆ ಬಟ್ಟೆ-ಬರೆ ಇಡುವ ಪೆಟ್ಟಿಗೆ ನಾಶವಾದ ಹಿನ್ನೆಲೆ ಮಕ್ಕಳಿಗೆ ತೊಡಲು ಬಟ್ಟೆಗಳೇ ಇಲ್ಲದಂತಾಗಿದೆ. ತಾಯಿ-ಮಕ್ಕಳು ಉಟ್ಟ ಬಟ್ಟೆಯಲ್ಲೇ ಕಾಲ ಕಳೆಯುವಂತಾಗಿದೆ. ಹರಿದ ಬಟ್ಟೆಯಲ್ಲಿರುವ ಮಕ್ಕಳಿಗೆ ಒಂದು ಜೊತೆ ಬಟ್ಟೆಯನ್ನೂ ಕೊಡಿಸಲು ಆಗದ ಸ್ಥಿತಿಯಲ್ಲಿ ತಾಯಿ ಇದ್ದಾಳೆ. ಅಡುಗೆ ಮಾಡಿಕೊಳ್ಳಲು ಯಾವ ಪಾತ್ರೆ ಸಮಾನುಗಳು‌ ಇಲ್ಲದೇ ಇರುವುದರಿಂದ ಗ್ರಾಮದಲ್ಲೇ ಇರುವ ಅನಾಥ ಆಶ್ರಮದಲ್ಲಿ ಎರಡು ಹೊತ್ತು ಊಟ ಮಾಡಿ ಮಲಗುವಂತಾಗಿದೆ.

ಇಷ್ಟೆಲ್ಲಾ ಆದರೂ ಕೂಡ ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಅಧಿಕಾರಿಗಳು, ಚುನಾವಣೆ ಮುಗಿದ ನಂತರ ಕಂಡೂ ಕಾಣದಂತಿರುವ ರಾಜಕಾರಣಿಗಳ ಅಸಡ್ಡೆ ಎದ್ದು ಕಾಣುತ್ತಿದೆ.

ಒಟ್ಟಾರೆ, ಕೂಲಿ ನಾಲಿ ಮಾಡಿ ಮಕ್ಕಳಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಹಾಕುತ್ತಿದ್ದ ಮಹಿಳೆ ಈಗ ಮಕ್ಕಳ ತುತ್ತಿನ ಚೀಲ ತುಂಬಿಸಲು ಪರದಾಡುತ್ತಿದ್ದಾಳೆ. ಜೊತೆಗೆ ಇದ್ದ ಸೂರು ಕಳೆದುಕೊಂಡು ತಾಯಿ-ಮಕ್ಕಳು ಬೀದಿಗೆ ಬಂದಿದ್ದಾರೆ.

ಕಡು ಕಷ್ಟದಲ್ಲಿರುವ ಲಲಿತಾಬಾಯಿ ಕುಟುಂಬಕ್ಕೆ ಅಧಿಕಾರಿಗಳ ಸಹಕಾರದ ಜೊತೆಗೆ ಸಹೃದಯಿಗಳ ಸಹಾಯ ಅಗತ್ಯವಾಗಿದೆ ಯಾರಾದರೂ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸುತ್ತಾರಾ..? ಕಾದು ನೋಡಬೇಕಿದೆ.