ಓವರ್ ಟೆಕ್ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಕ್ಯಾಂಟರ್ : ಸಮಯಕ್ಕೆ ಸರಿಯಾಗಿ ಬಾರದ ಅ್ಯಂಬುಲೆನ್ಸ್ ; ಗಾಯಾಳು ಬೈಕ್ ಸವಾರ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಕನಕದಾಸ ( ಕೆಸಿಪಿ ಛತ್ರ ) ವೃತ್ತದ ಬಳಿ ನಡೆದಿದೆ.

ಮೃತನನ್ನು ರಂಗಪ್ಪ ಸರ್ಕಲ್ ನಿವಾಸಿ ಉಮೇಶ್(51) ಎಂದು ಗುರುತಿಸಲಾಗಿದೆ.

ಮೃತ ಬೈಕ್ ಸವಾರ. ಅರಳುಮಲ್ಲಿಗೆಯಿಂದ ದ್ವಿಚಕ್ರ ವಾಹನದಲ್ಲಿ ಮಗನೊಂದಿಗೆ ನಗರಕ್ಕೆ ಬರುವಾಗ ಅದೇ ಮಾರ್ಗವಾಗಿ ಬಂದ ಕ್ಯಾಂಟರ್ ವಾಹನ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನದ ಕನ್ನಡಿಗೆ ಬಡಿದಿದೆ‌. ಈ ವೇಳೆ ಬೈಕ್ ಸವಾರ ಉಮೇಶ್ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದ್ವಿಚಕ್ರ ವಾಹನದಲ್ಲಿದ್ದ ಉಮೇಶ್ ಅವರ 14 ವರ್ಷದ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ಆತನಿಗೆ ಯಾವುದೇ ಗಾಯಗಳಾಗಿಲ್ಲ.

ನೇಕಾರ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಈ ಹಿಂದೆ ಕರೇನಹಳ್ಳಿಯಲ್ಲಿ ವಾಸವಿದ್ದರು. ಈಚೆಗೆ ರಂಗಪ್ಪ ಸರ್ಕಲ್ ನಲ್ಲಿ ಮನೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಜನಪರ ಮಂಜುನಾಥ್ ಮಾತನಾಡಿ ಗಾಯಾಳು ಉಮೇಶ್ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಕೂಡಲೇ ಅಂಬುಲೆನ್ಸ್ ಬಂದಿದ್ದರೆ ಪ್ರಾಣ ಉಳಿಸಬಹುದಿತ್ತು. ಸುಮಾರು ಅರ್ಧ ಗಂಟೆಯಾದರೂ ಅಂಬುಲೆನ್ಸ್ ಬಾರದ ಕಾರಣ ಗಾಯಾಳು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತೀಚಿಗೆ ಸರ್ಕಾರಿ ಅ್ಯಂಬುಲೆನ್ಸ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ತುರ್ತು ಪರಿಸ್ಥಿತಿಗಳಲ್ಲಿ ಕರೆ ಮಾಡಿದರೆ ಖಾಸಗಿ ಅ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಬರುತ್ತಿವೆ. ಅವಘಡಕ್ಕೆ ಒಳಗಾದವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆ ಮೂಲಕ ಸಂಕಷ್ಟದಲ್ಲಿರುವ ಕುಟುಂಬವನ್ನು ಸುಲಿಗೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.