ದೊಡ್ಡಬಳ್ಳಾಪುರದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ದಿನಪತ್ರಿಕೆ ಹಂಚುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ದೊಡ್ಡಬಳ್ಳಾಪುರ:ಸಂಘಟನೆಗಳು ಜನಸ್ನೇಹಿ ಯಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ವಿಶಿಷ್ಟವಾಗಿ ಕಾರ್ಯನಿರ್ವಹಿಸುವ ಅವಕಾಶ ಇದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಹೇಳಿದರು.
ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ದಿನಪತ್ರಿಕೆ ಹಂಚುವ ಮಕ್ಕಳಿಗೆ ಪುಸ್ತಕ, ಲೇಖನ ಪರಿಕರಗಳ ವಿತರಣೆ ಕಾರ್ಯಕ್ರಮ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ಸಂಸ್ಥೆಯ ಮೂಲಕ ನಿತ್ಯ ದಾಸೋಹ ಸೇವೆ ನಿರಂತರವಾಗಿ ನಡೆಯುತ್ತಿದ್ದು, ಹಲವು ದಾನಿಗಳು ಇದಕ್ಕೆ ಕೈಜೋಡಿಸಿದ್ದಾರೆ. ದಿನಪತ್ರಿಕೆ ಹಂಚುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ವಾಗಿ ನೋಟ್ ಪುಸ್ತಕ ಹಾಗೂ ಲೇಖನ ಪರಿಕರಗಳನ್ನು ವಿತರಿಸಲಾಗುತ್ತಿದೆ. ನಿತ್ಯದ ಸುದ್ದಿಗಳನ್ನು ಜನತೆಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಎಷ್ಟು ಗಣನೀಯವೋ ಅದೇ ರೀತಿಯಲ್ಲಿ ಸುದ್ದಿಪತ್ರಿಕೆ ಹಂಚುವ ವಿತರಕರು ಹಾಗೂ ಮನೆಮನೆಗೆ ತಲುಪಿಸುವ ಮಕ್ಕಳ ಕೊಡುಗೆಯೂ ಅಪಾರ ಎಂದರು.
ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ಕನ್ನಡ ಸಂಘಟನೆಗಳು ವಿಭಿನ್ನವಾಗಿ ತನ್ನ ಆಶಯಗಳ ಸಾಕಾರಕ್ಕೆ ಶ್ರಮಿಸುವ ಅವಕಾಶಗಳಿದ್ದು, ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುವುದು ಅಗತ್ಯ. ಪತ್ರಿಕೆ ಹಂಚುವ ಮಕ್ಕಳ ಶೈಕ್ಷಣಿಕ ಮುನ್ನಡೆಗೆ ಪ್ರೋತ್ಸಾಹದಾಯಕವಾಗಿ ಪುಸ್ತಕಗಳ ವಿತರಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಸಾಮಾಜಿಕ ಪ್ರಗತಿಗೆ ಶೈಕ್ಷಣಿಕ ಸಬಲೀಕರಣವೇ ಪ್ರಧಾನ. ವಿದ್ಯಾವಂತ ಸಮಾಜ ನಿರ್ಮಾಣಕ್ಕೆ ಸಂಘಟನೆಗಳು ಈ ರೀತಿಯ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿರುವುದು ಗಣನೀಯ ಎಂದರು.
ಕಾರ್ಯಕ್ರಮವನ್ನು ತಾಲೂಕು ವೈದ್ಯಾಧಿಕಾರಿ ಡಾ.ಶಾರದಾ ನಾಗಾನಾಥ್ ಉದ್ಘಾಟಿಸಿದರು. ಇದೇ ವೇಳೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್, ಮೆಳೇಕೋಟೆಯ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ಮಕ್ಕಳ ತಜ್ಞ ವೈದ್ಯ ಡಾ.ಸುಭಾಶ್ ಶಿಂಪಿಗೇರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್.ಡಿ. ಉಪ್ಪಾರ್,ಶಿಕ್ಷಕಿ ಜಿ.ರೂಪಶ್ರೀ,ಕುಸ್ತಿ ತರಬೇತು ದಾರ ಪೈಲ್ವಾನ್ ಚೌಡಪ್ಪ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಂಜುನಾಥ್ ಸುಗಟೂರು, ಬಾಲೆಪುರ ಮಂಜಣ್ಣ, ಜಗದೀಶ್ ಬೂದಿಹಾಳ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಸಂಘಟನಾ ಕಾರ್ಯದರ್ಶಿ ಅರವಿಂದ್, ಚೇತನ್ಗೌಡ, ಸುಭಾಷ್ಚಂದ್ರ, ದೊಡ್ಡೇಗೌಡ, ಅಲ್ತಾಫ್, ರಂಜಿತ್, ನರೇಂದ್ರ, ಸುರೇಶ್ ದಾವಣಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.