ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ದೊಡ್ಡಬಳ್ಳಾಪುರ: ಕೊನಘಟ್ಟ ಗ್ರಾಮದಲ್ಲಿ ವಿಜ್ಞಾನದ ವಿಷಯಗಳಲ್ಲಿ ಬರುವ ಹಲವಾರು ಸಿದ್ಧಾಂತಗಳನ್ನು ಪ್ರಯೋಗಗಳ ಸಹಾಯದಿಂದ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಉತ್ತಮ, ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಇನ್ನೂ ಉತ್ತಮ ಎಂಬುದನ್ನು ಸಾಬೀತು ಮಾಡಲು ಪ್ರಯೋಗಾಲಯಗಳು ಸಹಕಾರಿ ಆಗುತ್ತವೆ ಎಂದು ಪ್ರಾಂಶುಪಾಲ ಜಿ.ದಯಾನಂದ್ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮುಸಾಶಿ ಕಂಪನಿಯ ನೆರವಿನೊಂದಿಗೆ ನಿರ್ಮಾಣವಾಗಿರುವ ನೂತನ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಯೋಗಾಲದ ವೀಕ್ಷಣೆಯೂ ವಿದ್ಯಾರ್ಥಿಗಳಲ್ಲಿ ಆಲೋಚನಾ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಯೋಚಿಸುವ, ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ ಎಂದರು.

ಶೈಕ್ಷಣಿಕ ವಿಷಯಗಳಲ್ಲಿ ವಿಜ್ಞಾನ ಕಲಿಕೆಯು ಮಹತ್ವದ ಸ್ಥಾನ ಪಡೆದುಕೊಂಡಿದೆ. ವಿಜ್ಞಾನ ಕೇವಲ ಮಾಹಿತಿಗಷ್ಟೇ ಸಿಮೀತವಾಗಿಲ್ಲ. ವಿಜ್ಞಾನ ನಮ್ಮ ವೈಜ್ಞಾನಿಕ ಆಲೋಚನೆಯನ್ನು ಉತ್ತೇಜಿಸುತ್ತದೆ. ವಿಜ್ಞಾನದ ಪ್ರಗತಿಯಿಂದ ಸುಲಭ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿಸಲು ಮುಂದಾಗಬೇಕು. ವಿಜ್ಞಾನದ ಹಲವು ಪ್ರಯೋಗಗಳಿಗೆ ಪ್ರಾತ್ಯಕ್ಷಿಕೆ ನೀಡಿದಾಗ ವಿದ್ಯಾರ್ಥಿಗಳು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮುಸಾಶಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೆತಗೊವಾ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳು ದೊರೆತಾಗ ಮಾತ್ರ ಅವರಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ. ಗ್ರಾಮೀಣ ಭಾಗದ ಪದವಿ ಪೂರ್ವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸಾಶಿ ಕಂಪನಿಯಿಂದ ಪ್ರಯೋಗಾಲಯ ನಿರ್ಮಿಸಿಕೊಡಲಾಗಿದೆ. ವಿದ್ಯಾರ್ಥಿಗಳು ಪ್ರಯೋಗಾಲಯದ ಸದುಪಯೋಗವನ್ಬು ಪಡೆದುಕೊಂಡು ಶೈಕ್ಷಣಿಕ ಪ್ರಗತಿಯನ್ನು ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೇಸ್ ವಿನುತಾ, ಉಪನ್ಯಾಸಕರುಗಳಾದ ನಾಗಪ್ಪಗೌಡ, ಅರ್ಚನಾ, ಕಲ್ಪನಾ, ನಂದಕುಮಾರ್, ಮುಸಾಶಿ ಕಂಪನಿಯ ಉಪಾಧ್ಯಕ್ಷ ವೆಂಕಟೇಶ್ವರಲು, ಹಿರಿಯ ವ್ಯವಸ್ಥಾಪಕ ಸುದರ್ಶನರೆಡ್ಡಿ, ಯೋಜನಾ ನಿರ್ದೇಶಕ ಸುಧಾಕರ್, ನಿರ್ದೇಶಕ ಶಿವಕುಮಾರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು