ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜೇನು ನೊಣಗಳ ದಿನಾಚರಣೆ

ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿಯ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಾರತೀಯ ಕೃಷಿಸಂಶೋಧನಾ ಪರಿಷತ್ತು, ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ವಿಶ್ವ ಜೇನು ನೊಣಗಳ ದಿನಾಚರಣೆ’ಯನ್ನು ಬುದವಾರ ಆಚರಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ಮಾತನಾಡಿ, ಜೇನು ಕೃಷಿಯು ದಿನಾಚರಣೆಗೆ ಅಷ್ಟೇ ಸೀಮಿತವಾ ಗದೆ, ರೈತರು ಜೇನುಕೃಷಿಯನ್ನು ಅಳವಡಿಸಿ ಕೊಂಡು ಸದುಪಯೋಗಪಡಿಸಿಕೊಂಡು ಉದ್ದಿಮೆದಾರರಾಗಬೇಕು. ಇದಕ್ಕೆ ಪೂರಕವಾದ ಮಾರ್ಗದರ್ಶನವನ್ನು ಕೃಷಿ ವಿಜ್ಞಾನ ಕೇಂದ್ರ ನೀಡಲಿದೆ ಎಂದರು.

ಜೇನು ಕೃಷಿ ಪ್ರಾಧ್ಯಾಪಕ ಡಾ. ಜಿ. ಈಶ್ವರಪ್ಪ ಮಾತನಾಡಿ, ಜೇನುನೊಣಗಳು ಉತ್ತಮ ಪರಾಗ ಸ್ಪರ್ಶ ಕೀಟಗಳಾಗಿದ್ದು, ಅನೇಕ ಆಹಾರ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತವೆ. ಜೇನು ಕುಟುಂಬಗಳನ್ನು ಕೀಟನಾಶಕ ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ರಕ್ಷಣೆ ಮಾಡಿ ಸಂತತಿಯನ್ನು ಪ್ರಕೃತಿಯಲ್ಲಿ ಹೆಚ್ಚಿಸುವಂತೆ ಮಾಹಿತಿ ನೀಡಿದರು.

ದಿನಾಚರಣೆಯ ಅಂಗವಾಗಿ ಪ್ರಗತಿಪರ ಜೇನು ಕೃಷಿಕ ಲಕ್ಷ್ಮಿದೇವಿಪುರದ ಕೆಂಪೇಗೌಡ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಧ್ಯಾಪಕ ಡಾ. ಜೆ.ವೆಂಕಟೇಗೌಡ, ಡಾ.ಜೆ.ವೀರನಾಗಪ್ಪ, ಮಂರ್ತ ಸಂಸ್ಥೆಯ ನಿರ್ದೇಶಕ ವಾಸು ಮತ್ತು ವಿಶಾಲ್, ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ. ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.