ಮುಂಗಾರಿಗೆ ಕೃಷಿ ಸಿದ್ಧತೆಯನ್ನು ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಜಾಥಾ
ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮುಂಗಾರಿಗೆ ಕೃಷಿ ಸಿದ್ಧತೆಯನ್ನು ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಭಾರತ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ನಡೆ ರೈತರ ಕಡೆ ಎಂಬ ದ್ಯೇಯೋದ್ದೇಶ ದೊಂದಿಗೆ ಮೇ 26 ರಿಂದ ಜೂನ್ 12, 2025 ರವರೆಗೆ ದೇಶದ್ಯಾಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾ.ಕೃ.ಸಂ.ಪ – ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 29,05,2025 ರಂದು ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಅರ್ಥ ಬಂದು ಸಾಹೂ, ನಿರ್ದೇಶಕರು, ಭಾ.ಕೃ.ಸಂ.ಪ.- ರಾಷ್ಟ್ರೀಯ ಹೈನು ಪೋಷಣೆ ಮತ್ತು ಶರೀರ ಶಾಸ್ತ್ರ ಸಂಸ್ಥೆ, ಆಡುಗೋಡಿ, ಬೆಂಗಳೂರು ಮತ್ತು ಡಾ. ಅರಿಂದಾಮ ತಾಲಿ, ಮುಖ್ಯಸ್ಥರು, ರಾಷ್ಟ್ರೀಯ ಹೈನು ಸಂಶೋಧನಾ ದಕ್ಷಿಣ ವಲಯ ಕೇಂದ್ರ ಇವರು ಭಾಗವಹಿಸಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಹಸಿರು ಧ್ವಜ ನಿಶಾನೆ ಮೂಲಕ ಚಾಲನೆ ನೀಡಿ, ಕೇಂದ್ರವು ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಕೇಂದ್ರದಿಂದ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ದವರೆಗೆ ಕಾಲ್ನಡಿಗೆ ಮೂಲಕ ಪಾಲ್ಗೊಂಡು ನರೆವೇರಿಸಿದರು.
ಜಾಗೃತಿ ಜಾಥದಲ್ಲಿ ಕೇಂದ್ರದ ಮುಖ್ಯಸ್ಥರಾದ ಡಾ. ಹನುಮಂತರಾಯ, ಬಿ.ಜಿ, ಕೇಂದ್ರದ ವಿಜ್ಞಾನಿಗಳು, ಇತರೆ ವಿಜ್ಞಾನಿ ತಂಡಗಳಲ್ಲಿ ಭಾಗವಹಿಸಿದ್ದರು ಕೇಂದ್ರೀಯ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳು, ವೆಂಕಟೇಶ್ ಬಾಬು, ಅದ್ಯಕ್ಷರು, ಜೈವಿಕ ಇಂಧನ ಸಂಘ, ಮುನೇಗೌಡ, ಉಪಾಧ್ಯಕ್ಷ, ಜೈವಿಕ ಇಂಧನ ಸಂಘ, ಹೆಚ್.ಎ. ನಾಗರಾಜು, ಮಾಜಿ ಅದ್ಯಕ್ಷರು, ಗ್ರಾಮ ಪಂಚಾಯಿತಿ, ಹಾಡೋನಹಳ್ಳಿ, ಪ್ರಗತಿಪರ ರೈತರು, ದೇಸಿ ವಿದ್ಯಾರ್ಥಿಗಳು, ಮಂತರ್ಲೀ ಸರ್ಕಾರೇತರ ಸಂಸ್ಥೆಯ ನಿರ್ದೇಶಕರಾದ ವಿಶಾಲ್, ಮೈತ್ರಿ ಸಂಸ್ಥೆಯ ಗಂಗರಾಜು ಇನ್ನೂ ಮುಂತಾದವರು ಭಾಗವಹಿಸಿ, ಕಾರ್ಯಕ್ರಮದ ದ್ಯೇಯೋದ್ದೇಶವಾದ ವಿಜ್ಞಾನಿಗಳ ನಡೆ ರೈತರ ಕಡೆ ಎಂಬ ಘೋಷಣೆಯ ಮೂಲಕ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಮಾನ್ಯ ಕೃಷಿ ಮಂತ್ರಿಗಳು, ಕೇಂದ್ರ ಸರ್ಕಾರ ಇವರ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಕೇಂದ್ರದಲ್ಲಿ ವೀಕ್ಷಣೆ ಮಾಡಲಾಯಿತು.
ವಿವಿಧ ವಿಜ್ಞಾನಿಗಳನ್ನೊಳಗೊಂಡ ಮೂರು ತಂಡಗಳು ಪ್ರತ್ಯೇಕವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ, ಎಸ್.ಎಸ್. ಘಾಟಿ, ರಾಜಘಟ್ಟ, ಕೊನಘಟ್ಟ, ಬಾಶೆಟ್ಟಿಹಳ್ಳಿ, ತಿಪ್ಪೂರು, ಹೊಸಹಳ್ಳಿ ಮತ್ತು ಗುಂಡಮಗೆರೆ ಗ್ರಾಮ ಪಂಚಾಯಿತಿಗಳಲ್ಲಿ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಹಮ್ಮಿಕೊಳ್ಳ ಬೇಕಾದ ಕೃಷಿ ಚಟುವಟಿಕೆಗಳಾದ ಮಾಗಿ ಉಳುಮೆ, ಸೊರಗು ಮತ್ತು ಬಂಜೆ ನಂಜು ರೋಗದ ನಿರೋಧಕ ತಳಿ ಬಿ.ಆರ್.ಜಿ.-3, ಬರ ಮತ್ತು ಬೆಂಕಿ ರೋಗ ನಿರೋಧಕ ತಳಿ ಎಂ.ಎಲ್.-365 ಏಕದಳ ಮತ್ತು ದ್ವಿದಳ ಧಾನ್ಯಗಳಲ್ಲಿ ಬೀಜೋಪಚಾರ, ಡಿಎಪಿ ಬದಲಾಗಿ ಪೊಟ್ಯಾಶ್ಯುಕ್ತ ರಸಗೊಬ್ಬರಗಳ ಬಳಕೆ, ಡೋನ್ ಮೂಲಕ ರಾಸಾಯನಿಕಗಳ ಸಿಂಪರಣೆ, ಸೂಕ್ಷ್ಮ ನೀರಾವರಿಯ ಬಳಕೆ ಮತ್ತು ಉಪಯೋಗಗಳು, ತೋಟಗಾರಿಕೆ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಇವುಗಳ ಕುರಿತು ತಾಂತ್ರಿಕ ಮಾಹಿತಿ ನೀಡಲಾಯಿತು. ರೈತರ ಸಮಸ್ಯೆಗಳಿಗೆ ವಿವಿಧ ವಿಜ್ಞಾನಿಗಳು ಸಲಹೆ ನೀಡಿದರು ಮತ್ತು ಡ್ರೋನ್ ಮೂಲಕ ಸಸ್ಯ ಸಂರಕ್ಷಕಗಳ ಸಿಂಪರಣೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.