ತಿರುಗಾಡುವ ರಸ್ತೆ ಮುಚ್ಚಿ ರೈತರು ಹಾಗೂ ಶಾಲಾ ಮಕ್ಕಳಿಗೆ ತೊಂದರೆ : ಕ್ರಮಕ್ಕೆ ಒತ್ತಾಯ

ಚಾಮರಾಜನಗರ: ತಿರುಗಾಡುವ ರಸ್ತೆ ಮುಚ್ಚಿ ರೈತರು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಮುಚ್ಚಿರುವ ರಸ್ತೆ ತೆರವುಗೊಳಿಸಬೇಕು ಎಂದು ಹಿರಿಯ ರೈತ ಮುಖಂಡ ಎಸ್.ಮಾದಶೆಟ್ಟಿ ಅವರು ತಿಳಿಸಿದರು.

ತಾಲ್ಲೂಕಿನ ಬಸವಾಪುರ ಗ್ರಾಮಕ್ಕೆ ಒಳಪಡುವ ಮುಖ್ಯ ರಸ್ತೆಯಿಂದ ಚಿಕ್ಕಹೊಳೆ ಎಡದಂಡೆ ನಾಲೆಗೆ ತೆರಳುವ ಮಣ್ಣಿನ ರಸ್ತೆಯನ್ನು ಇಂದು ಜಮೀನಿನ ಮಾಲೀಕರೊಬ್ಬರು ಜೆಸಿಬಿ ಮೂಲಕ ರಸ್ತೆಯನ್ನು ಅಗೆಸಿ ಬೇಲಿ ನಿರ್ಮಾಣ ಮಾಡಿರುವುದರಿಂದ ಸುತ್ತಮುತ್ತಲಿನ ಬಹುತೇಕ ರೈತರಿಗೆ ಹಾಗೂ ಶಾಲಾ ಮಕ್ಕಳಿಗೆ ತಿರುಗಾಡಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಲತಲಾಂತರದಿಂದಲೂ ಈ ಭಾಗದಲ್ಲಿ ವಾಸ ಮಾಡುತ್ತಿರುವ ರೈತರು ಬಸವಾಪುರ ಮುಖ್ಯ ರಸ್ತೆಯಿಂದ ಚಿಕ್ಕ ಹೊಳೆ ಎಡದಂಡೆ ನಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಿರುಗಾಡುತ್ತಾ ಬಂದಿದ್ದೇವೆ, ಆದರೆ ನಂಜುಂಡಶೆಟ್ಟಿ, ಪಿಂಡಾರಿ ಮಹದೇವಶೆಟ್ಟಿ, ಶಿವಪ್ಪ ಹಾಗೂ ಮಹದೇವ ಶೆಟ್ಟಿ ಎಂಬುವರು ಸೇರಿಕೊಂಡು ಗುರುವಾರ ಜೆಸಿಬಿ ಮೂಲಕ ರಸ್ತೆಯನ್ನು ಅಗೆಯಿಸಿ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ರೈತರು ಹಾಗೂ ಶಾಲೆಗೆ ತೆರಳುವ ಮಕ್ಕಳಿಗೆ ತಿರುಗಾಡಲು ಆಗದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿದರು.

ಈ ಸಂಬಂಧ ಇತ್ತೀಚೆಗೆ ರೈತರಿಗೆ ದಾರಿ ಬಿಡಿಸಿ ಕೊಡಬೇಕೆಂದು ತಹಸಿಲ್ದಾರ್ ಅವರಿಗೆ ಮನವಿ ಮಾಡಿದ್ದೆವು ಆದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ, ಇದರಿಂದ ಜಮೀನಿನ ಮಾಲೀಕರೊಬ್ಬರು ತಿರುಗಾಡುವ ರಸ್ತೆ ತಮಗೆ ಸೇರಿದೆ ಎಂದು ಬೇಲಿ ಹಾಕುವ ಮೂಲಕ ತೊಂದರೆ ನೀಡಿದ್ದಾರೆ. ಇದರಿಂದ ರೈತರು ಉತ್ಪಾದಿಸುವ ಫಸಲುಗಳನ್ನು ಸಾಗಣಿಕೆ ಮಾಡಲು ಆಗುತ್ತಿಲ್ಲ, ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗುತ್ತಿಲ್ಲ, ಇರುವ ಒಂದೇ ರಸ್ತೆಯನ್ನು ಮುಚ್ಚಿರುವುದರಿಂದ ಅನೇಕ ಸಮಸ್ಯೆಗಳು ಉಂಟಾಗಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ತಹಸಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಧರಣಿಯಲ್ಲಿ ಗ್ರಾಮದ ರೈತರಾದ ಬಸವಣ್ಣಶೆಟ್ಟಿ,ಬಸಪ್ಪ, ಕುಮಾರ್, ಎಂ. ಕುಮಾರ್ ಸೇರಿದಂತೆ ಮಹಿಳೆಯರು ಮತ್ತು ಶಾಲಾ ಮಕ್ಕಳು ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ