ರೈತನ ಮೇಲೆ ಕರಡಿ ದಾಳಿ
ದೊಡ್ಡಬಳ್ಳಾಪುರ:ತಾಲ್ಲೂಕಿನ,ಸಾಸಲು ಹೋಬಳಿ ಹೂಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಕ್ಕಲಹಳ್ಳಿ ಗ್ರಾಮದಿಂದ ಮೇಕೆ ಮೇಯಿಸಲು ಹೋಗಿದ್ದ ಲಕ್ಷ್ಮೀನರಸಪ್ಪನ(58) ಮೇಲೆ ಏಕಾಏಕಿ ಕರಡಿ ದಾಳಿ ಮಾಡಿ ಮನ ಬಂದಂತೆ ಮೈಯ್ಯೆಲ್ಲಾ ಪರಚಿ ಗಾಯ ಮಾಡಿದ ಘಟನೆ ನಡೆದಿದೆ.
ರೈತ ಊರಿನ ಹೊರವಲಯದ ಅರಣ್ಯದ ಪಕ್ಕದಲ್ಲಿ ಎಂದಿನಂತೆ ಮೇಕೆ ಮೇಯಿಸಲು ಹೋದ ಸಂದರ್ಭದಲ್ಲಿ ಸುಮಾರು ಮದ್ಯಾಹ್ನ 3.30 ಸಮಯದಲ್ಲಿ ಕರಡಿ ಹಲಸಿನ ಹಣ್ಣು ತಿನ್ನಲು ಹಲಸಿನ ಮರ ಹತ್ತಿತ್ತು. ಮೇಕೆ ಕರೆದೊಯ್ಯುತ್ತಿದ್ದ ಶಬ್ದ ಕೇಳುತ್ತಿದ್ದಂತೆ ಮರದಿಂದ ಇಳಿದು ರೈತನ ಮೇಲೆ ಎರಗಿ ಮೈಯ್ಯೆಲ್ಲಾ ಪರಚಿ ಗಾಯಗೊಳಿಸಿತು. ರೈತ ಜೋರಾಗಿ ಕೂಗಿ ಕೊಂಡ ಶಬ್ದದಿಂದ ಕೇಳಿ ಗಾಬರಿಯಾಗಿ ಕರಡಿ ಅಲ್ಲಿಂದ ಓಡಿ ಹೋಗಿದೆ.
ಕರಡಿ ದಾಳಿಯಿಂದ ಗಾಯಗೊಂಡ ಲಕ್ಷ್ಮೀನರಸಪ್ಪನವರು ಕೂಡಲೇ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ.
ಹೊಸಹಳ್ಳಿ ವ್ಯಾಪ್ತಿಯ ಸುತ್ತ ಮುತ್ತಾ ಗ್ರಾಮಗಳಲ್ಲಿ ಚಿರತೆ, ಕರಡಿಗಳ ಕಾಟ ಹೆಚ್ಚಾಗಿದೆ.. ಕೂಡಲೆ ಇವುಗಳನ್ನು ಸೆರೆ ಹಿಡಿದು ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಸಂಬಂಧಪಟ್ಟ ಅರಣ್ಯ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಮನವಿ ಹಿನ್ನೆಲೆ ಕರಡಿ, ಚಿರತೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.