ನಟ ಕಮಲ್ ಹಾಸನ್ ವಿರುದ್ದ ಕರವೇ ವತಿಯಿಂದ ಪ್ರತಿಭಟನೆ

ಚಾಮರಾಜನಗರ: ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ) ಜಿಲ್ಲಾ ಘಟಕ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿ ಕಮಲ್ ಹಾಸನ್ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ಜಿಲ್ಲಾಧ್ಯಕ್ಷ ಮಂಜೇಶ್.ಹೆಚ್.ಎನ್. ಮಾತನಾಡಿ, ತಮಿಳು ಭಾಷೆಯಿಂದ ಕನ್ನಡ ಭಾಷೆ ಉಗಮವಾಯಿತು ಎಂಬ ಉದ್ದೇಶಪೂರ್ವಕವಾಗಿ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ. ಈ ಸುಳ್ಳು ಹಾಗೂ ಆಧಾರದಹಿತ ಹೇಳಿಕೆಯು ಕನ್ನಡ ಭಾಷೆಯ ಶ್ರೀಮಂತ ಇತಿಹಾಸ ಸಂಸ್ಕೃತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಅಘಾತವನ್ನುಂಟು ಮಾಡಿದೆ. ಕನ್ನಡಿಗರಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾದರೂ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸದೆ ತಮ್ಮ ಹೇಳಿಕೆಗೆ ಬದ್ಧರಾಗಿರುವುದು ಕನ್ನಡಿಗರಿಗೆ ಮತ್ತಷ್ಟು ಆಕ್ರೋಶ ಹೆಚ್ಚಾಗಿಸಿದೆ. ಕನ್ನಡ ನಾಡು ನುಡಿ, ಜಲ, ಸಂಸ್ಕೃತಿಯ ಏಳಿಗೆಗಾಗಿ ಶ್ರಮಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ಕಮಲ್ ಹಾಸನ್ ಅವರ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಜೂ. 05 ರಂದು ಬಿಡುಗಡೆಯಾಗುವ ಅವರ ಚಲನಚಿತ್ರ ‘ಥಗ್ ಲೈಫ್’ ಚಿತ್ರ ಬಿಡುಗಡೆಯಾಗದಂತೆ ಕರ್ನಾಟಕದಲ್ಲಿ ಕ್ಷಮೆ ಯಾಚಿಸುವ ತನಕ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮೀ,
ಚಾ.ನಗರ ತಾಲೂಕು ಅಧ್ಯಕ್ಷ ಹಂಡ್ರಕಳ್ಳಿ ಸಂತೋಷ್, ಉಪಾಧ್ಯಕ್ಷ ಸುಂದರ್ ರಾಮಸಮುದ್ರ, ಯಳಂದೂರು ತಾಲ್ಲೂಕು ಅಧ್ಯಕ್ಷ ಎನ್. ರಮೇಶ್, ತಾಲೂಕು ಅಧ್ಯಕ್ಷೆ ಸುಮಾ , ಮುಖಂಡರಾದ ಮಹೇಶ್,
ರಾಘವೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ