ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ: ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಮಂಗಲ ಗ್ರಾಮದ ಗ್ರಾಮಸ್ಥರಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಮಾಯಿಸಿ ಪ್ರತಿಭಟನೆಕಾರರು ಘೋಷಣೆ ಕೂಗಿದರು.
ಇದೆ ವೇಳೆ ಗ್ರಾಮದ ಮುಖಂಡ ರವಿಕುಮಾರ್ ಮಾತನಾಡಿ, 2022-23 ನೇ ಸಾಲಿನಲ್ಲಿ ಮಂಗಲ ಗ್ರಾಮಸ್ಥರಿಗೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಮಂಜೂರಾಗಿದ್ದು, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆಯಾಗಿ ಪಾಸ್ ಆಗಿರುತ್ತದೆ.ಈ ಆದೇಶದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹಾಗೂ ಆರ್ ಡಬ್ಲ್ಯೂ ಎಸ್ ಇಲಾಖೆ ಅಧಿಕಾರಿಗಳಿಂದ ಕುಡಿಯುವ ನೀರಿನ ಟ್ಯಾಂಕ್ ಅನ್ನು ನಿರ್ಮಾಣ ಮಾಡಲು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವ ಸ್ಥಳ ಸರ್ಕಾರಿ ಸ್ಥಳವಾಗಿದ್ದು, ಅಲ್ಲಿ ಗುದ್ದಲಿ ಪೂಜೆಯನ್ನು ಮಾಡಲಾಗಿರುತ್ತದೆ. ಅದರಂತೆ ನಿಗದಿಯಾಗಿದ್ದ ಸ್ಥಳದಲ್ಲಿ ಟ್ಯಾಂಕ್ ನಿರ್ಮಾಣ ಮಾಡಲು ಹೋದಾಗ ಮಂಗಲ ಗ್ರಾಮದ ಡ್ರಾಮಾ ಮಾಸ್ಟರ್ ಆರ್.ಶಿವಣ್ಣ ಅವರು ತಡೆದು ತೊಂದರೆ ನೀಡುತ್ತಾರೆ, ಮತ್ತು ಅವರ ಸಂಬಂಧಿಕರು ನಿರ್ಮಾಣದ ಬಗ್ಗೆ ಪದೇ ಪದೇ ತೊಂದರೆ ನೀಡುತ್ತಿರುತ್ತಾರೆ. ಸದರಿ ಸ್ಥಳವನ್ನು ಡ್ರಾಮಾ ಮಾಸ್ಟರ್ ಆರ್.ಶಿವಣ್ಣನವರು ತಮ್ಮ ತಾಯಿ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುತ್ತಾರೆ. ಈ ಬಗ್ಗೆ ಗ್ರಾಮಸ್ಥರು ಕೇಳಿದಾಗ ನಾನೇ ಬಿಟ್ಟುಕೊಡುತ್ತೇನೆ ಎಂದು ನೆಪ ಹೇಳುತ್ತಾರೆ ಮತ್ತು ಕಾಮಗಾರಿ ಮಾಡಲು ಹೋದರೆ ಬೇರೆಯವರಿಂದ ಕುಮ್ಮಕ್ಕು ನೀಡಿ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಾರೆ. ಸೆ.09 ರಂದು ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ದೂರು ಸಲ್ಲಿಸಲಾಗಿದ್ದರೂ ಕೂಡ ಯಾವುದೇ ಕ್ರಮ ಜರುಗಿಸಿರುವುದಿಲ್ಲ, ಆದ್ದರಿಂದ ತಾವು ಮಂಗಲ ಗ್ರಾಮಸ್ಥರ ಪರವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಕಾನ್ಸಿರಾಮ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸು ಮಾತನಾಡಿ, ಜಲ್ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗಬೇಕಾಗಿದ್ದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕನ್ನು ಆದಷ್ಟು ಬೇಗ ನಿರ್ಮಾಣ ಮಾಡಿ ಕೊಡಬೇಕು ಇಲ್ಲವಾದಲ್ಲಿ ಈ ಬಗ್ಗೆ ಜಿಲ್ಲಾ ಆಡಳಿತ ಭವನದ ಮುಂಭಾಗ ಗ್ರಾಮಸ್ಥರಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಜಿಲ್ಲಾ ಪಂಚಾಯತ್ ಸಭಾಂಗಣಕ್ಕೆ ತೆರಳಿ ಜಿ.ಪಂ. ಸಿಇಒ. ಮೋನಾ ರೋತ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅವರು ಸ್ಥಳದಲ್ಲಿಯೇ ಇದ್ದ ಮಂಗಲ ಗ್ರಾ.ಪಂ. ಪಿಡಿಒ ಆದಿಶೇಷನ್ ಹಾಗೂ ಜೆ.ಜೆ.ಎಂ. ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಜಗದೀಶ್ ಅವರಿಗೆ 24 ಗಂಟೆ ಒಳಗೆ ಈ ಬಗ್ಗೆ ಮಾಹಿತಿ ನೀಡಬೇಕು, ಇಲ್ಲವಾದಲ್ಲಿ ನಿಮ್ಮ ಬಗ್ಗೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಂ.ಪಂ. ಮಾಜಿ ಸದಸ್ಯರಾದ ರವಿ, ಮುಖಂಡರಾದ ಮಂಜು.ಎನ್, ಬಸವಣ್ಣ, ಪ್ರಕಾಶ್, ಮಹೇಂದ್ರ, ಪುಟ್ಟನಿಂಗಮ್ಮ, ಮಹದೇವಮ್ಮ, ರಮೇಶ್.ಆರ್, ರವಿ ಮೌರ್ಯ, ದಲಿತ ಮುಖಂಡರಾದ ಹೊಂಗನೂರು ನಟರಾಜ್, ಬೋಗಾಪುರ ನಾಗೇಶ್, ಎಸ್.ಪಿ.ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ