ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿಯ 8 ಗ್ರಾಮಗಳಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಕಾರ್ಯಕ್ರಮ : ಎಸ್ವಿವೈಎಂ ನೊಂದಿಗಿನ ಒಪ್ಪಂದಕ್ಕೆ ಸಹಿ
ಚಾಮರಾಜನಗರ:ಎಸ್ವಿವೈಎಂನ ಆಶಾ ಯೋಜನೆಯ ಸಮಗ್ರ ಗ್ರಾಮಾಭಿವೃದ್ಧಿ ಕಾರ್ಯಕ್ರಮಕ್ಕಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಮತ್ತು ಎಸ್ವೈಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಸುಲುಗೋಡು ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು.
ಆಶಾ ಯೋಜನೆ ಸಮಗ್ರ ಗ್ರಾಮಾಭಿವೃದ್ಧಿ ಕಾರ್ಯಕ್ರಮವನ್ನು ಸೀಮೆನ್ಸ್ ಟೆಕ್ನಾಲಜಿ ಮತ್ತು ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದಲ್ಲಿ ಅಕ್ಟೋಬರ್ 2024 ರಿಂದ ಮಲೆ ಮಹದೇಶ್ವರ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿವಿವೇಕಾನಂದ ಯೂತ್ ಮೂವ್ಮೆಂಟ್ (ಎಸ್.ವಿ.ವೈ.ಎಂ) ಹಾಗೂ ಜಿಲ್ಲಾಧಿಕಾರಿಗಳು ಸಹ ಸಮ್ಮತಿ ಪತ್ರಕ್ಕೆ (ಎಂಒಯು) ಸಹಿ ಮಾಡಿದ್ದಾರೆ. ಈ ಸಹಭಾಗಿತ್ವದೊಂದಿಗೆ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯತ್ನ 8 ಗ್ರಾಮೀಣ ಪ್ರದೇಶಗಳಲ್ಲಿರುವ 3500 ಜನಗಳಿಗೆ ತಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಪೂರಕವಾಗಿದೆ.
ಈ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಫಲಿತಾಂಶಗಳನ್ನು ಹೆಚ್ಚಿಸುವುದು, ಆರೋಗ್ಯ ಸೇವೆಯನ್ನು ಒದಗಿಸುವುದು, ನೀರಿನ ಸಂರಕ್ಷಣೆ, ಕೃಷಿಯೇತರ ಚಟುವಟಿಕೆಗಳಿಗೆ ಉತ್ತೇಜನ ಮತ್ತು ಯುವಕರಿಗೆ ಕೌಶಲ್ಯ ತರಬೇತಿಯನ್ನು ಒದಗಿಸುವಂತಹ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕೃತಗೊಳಿಸಲಾಗಿದೆ. ಈ ಚರ್ಚೆಯ ಸಂದರ್ಭದಲ್ಲಿ ಅತ್ಯಂತ ದೂರದ ಹಾಗೂ ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಈ ಸೌಲಭ್ಯ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಲಾಗಿದೆ.
ಜಿಲ್ಲಾಧಿಕಾರಿಯವರು ಚರ್ಚೆಯ ಸಂದರ್ಭದಲ್ಲಿ ಸಹಯೋಗದ ಮೂಲಕ ಒಪ್ಪಂದದಂತೆ ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶ ಖಚಿತಪಡಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಸವಿತಾ ಸುಲುಗೋಡು ಸಮುದಾಯ-ಆಧಾರಿತ ಅಭಿವೃದ್ಧಿಯಲ್ಲಿ ಎಸ್ವಿವೈಎಂ ನ 41 ವರ್ಷಗಳ ಅನುಭವವನ್ನು ಹೊಂದಿದ್ದು, ಸರ್ಕಾರದೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದರಿಂದ ಅರ್ಥಪೂರ್ಣ ಬದಲಾವಣೆಯನ್ನು ಸಮುದಾಯದಲ್ಲಿ ಕಾಣಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಹಾಗೂ ಸಮುದಾಯದೊಂದಿಗೆ ಧೀರ್ಘಕಾಲಿಕ ಸಹಭಾಗಿತ್ವ ಹಾಗೂ ಪಾಲುದಾರಿಕೆಯ ಮೂಲಕ ಕಾರ್ಯನಿರ್ವಹಿಸಿದರೆ ಸಮಗ್ರ ಗ್ರಾಮೀಣಾಭಿವೃದ್ಧಿ ಗುರಿಯನ್ನು ಹೊಂದಲು ಈ ಒಪ್ಪಂದವು (ಎಂಒಯು) ಉತ್ತಮ ಅಡಿಪಾಯವಾಗಿರುತ್ತದೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ನಿರ್ದೇಶಕರಾದ ಚಕ್ರಪಾಣಿ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಎ.ಸಿ.ಎಫ್ ಸ್ವಪ್ನಲ್ ಅಹಿರೆ, ಜಂಟಿ ಕೃಷಿ ನಿರ್ದೇಶಕರಾದ ಎಸ್.ಎಸ್. ಅಬಿದ್, ತೋಟಗಾರಿಕೆ ಉಪನಿರ್ದೇಶಕರಾದ ಬಿ.ಎಲ್ ಶಿವಪ್ರಸಾದ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಯ ಉಪನಿರ್ದೇಶಕರಾದ ಡಾ. ಎಲ್.ಹನುಮೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಎಚ್.ಎಸ್ ಬಿಂದ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಹಾಗೂ ಎಸ್ವೈಎಂ ಆಶಾ ಯೋಜನೆ ನಿರ್ದೇಶಕರಾದ ಡಾ. ಪುಷ್ಪಲತಾ ಅವರು ಈ ಸಹಭಾಗಿತ್ವದ ಪ್ರಯತ್ನವನ್ನು ಬಲಪಡಿಸುವ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ