ಯಲಹಂಕ ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸೈಕಲ್ ಗಳ ವಿತರಣೆ

ವಿಜಯಪುರ: ಸರಕಾರದ ಜೊತೆಯಲ್ಲಿ, ವಿವಿಧ ಸಂಘ, ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗಾಗಿ ನೀಡುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಕಡೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುರಳೀಧರ್ ಹೇಳಿದರು.
ಹೋಬಳಿಯ ನಾರಾಯಣಪುರದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ, ಯಲಹಂಕ ವಲಯದ ರೋಟರಿ ಸಂಸ್ಥೆಯ ವತಿಯಿಂದ ಶಾಲೆಯ 21 ಮಂದಿ ವಿದ್ಯಾರ್ಥಿಗಳಿಗೆ ಸೈಕಲ್ ಗಳ ವಿತರಣಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿ ಉನ್ನತಮಟ್ಟಕ್ಕೆ ಹೋಗಬೇಕು ಎನ್ನುವ ನಿಟ್ಟಿನಲ್ಲಿ, ಗ್ರಾಮ ಪಂಚಾಯಿತಿಯಿಂದ ಅಗತ್ಯವಾಗಿರುವ ಸಹಕಾರವನ್ನು ನೀಡಲಾಗುತ್ತಿದ್ದು, ಇದರ ಜೊತೆಯಲ್ಲಿ ವಿವಿಧ ಸಂಘ, ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು, ವಿದ್ಯಾರ್ಥಿಗಳ ಜೀವನದಲ್ಲಿ ಒಂದು ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ವ್ಯಾಸಂಗ ಮಾಡುವುದನ್ನು ರೂಢಿಸಿಕೊಳ್ಳಬೇಕು, ಪೋಷಕರೂವಿತರಣೆಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಯಲಹಂಕ ವಲಯದ ರೋಟರಿ ಸಂಸ್ಥೆಯ ಅಧ್ಯಕ್ಷೆ ಅಭಿಲೇಖಾ ಅವರು ಮಾತನಾಡಿ, ರೋಟರಿ ಸಂಸ್ಥೆಯು, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ವಿಶ್ವದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಸಂಸ್ಥೆಯು ನಿಮ್ಮ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಿದ್ದು, ಗ್ರಾಮೀಣ ಭಾಗದಲ್ಲಿ ಸರಿಯಾಗಿ ಬಸ್ಸಿನ ಸೌಕರ್ಯವಿಲ್ಲದೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಿರುವ ಬೈಸಿಕಲ್ ಗಳನ್ನು ಸದುಪಯೋಗ ಮಾಡಿಕೊಳ್ಳಬೇಕು, ಮನೆಗಳಲ್ಲಿ ಕೆಲಸಗಳಿಗೆ ಉಪಯೋಗ ಮಾಡಬಾರದು. ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು, ರಸ್ತೆಗಳಲ್ಲಿ ಹೋಗುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪ್ರೌಢಶಾಲೆಯ ಮುಖ್ಯಶಿಕ್ಷಕ ಪಿ.ಎಂ.ಕೊಟ್ರೇಶ್ ಮಾತನಾಡಿ, ಪ್ರತಿನಿತ್ಯ ಯೋಗ, ಧ್ಯಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳು ಪ್ರತಿನಿತ್ಯ ಸೈಕಲ್ ತುಳಿಯುವುದರಿಂದ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗುತ್ತದೆ. ಅವುಗಳ ನಿರ್ವಹಣೆಯನ್ನೂ ಮಾಡಿಕೊಳ್ಳಬೇಕು. ಶಾಲೆಗೆ ಬಂದು ಹೋಗುವುದಕ್ಕಷ್ಟೆ, ಬಳಕೆ ಮಾಡಿಕೊಳ್ಳಬೇಕು. ಇದರ ಜೊತೆಗೆ, ಕಲಿಕೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ಪೋಷಕರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಪಾಡಬೇಕು ಎಂದರು.
ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೂಪಾ, ಗ್ರಾಮ ಪಂಚಾಯಿತಿ ಸದಸ್ಯೆ ಕೋಮಲಬಸವರಾಜ್, ರೋಟರಿ ಸಂಸ್ಥೆಯ ಸಮುದಾಯ ಸೇವಾ ನಿರ್ದೇಶಕ ಉದಯ್ ಕುಮಾರ್, ಶಶಿಕುಮಾರ್, ಜಯರಾಮ್, ಸುಹಾಸ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲಾವಣ್ಯ, ಅನಂತ್, ಡೇರಿ ಅಧ್ಯಕ್ಷ ಚಂದ್ರೇಗೌಡ, ಶಿಕ್ಷಕರಾದ ಬಾಲಚಂದ್ರ, ವೆಂಕಟೇಶ್, ಆಂಜನೇಯ, ಶಾಂತಕುಮಾರಿ, ಸುಫ್ರಿಯಾ, ನಾಗವೇಣಿ, ಯಾಸ್ಮೀನ್, ಬಿಸಿಯೂಟದ ಸಿಬ್ಬಂದಿ ಮುಂತಾದವರು ಹಾಜರಿದ್ದರು.