ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಲಾನುಭವಿ ರೈತರಿಗೆ ಬಿತ್ತನೆ ಬೀಜ ವಿತರಣೆ
ದೊಡ್ಡಬಳ್ಳಾಪುರ:ತಾಲೂಕಿನ ಸಾಸಲು ಹೋಬಳಿಯಲ್ಲಿ ಭಾ.ಕೃ.ಸಂ.ಪ- ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಜೂ. 23 2025 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಒಟ್ಟು 106 ರೈತ ಫಲಾನುಭವಿಗಳಿಗೆ ಎಸ್.ಸಿ ಎಸ್.ಪಿ ಯೋಜನೆಯಡಿ ರಾಗಿ (ತಳಿ: ಎಂ.ಎಲ್-365) ಮತ್ತು ತೊಗರಿ (ತಳಿ: ಬಿ.ಆರ್.ಜಿ-5) ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಜೆ. ವೆಂಕಟೇಗೌಡ ರವರು ಮಾತನಾಡಿ ಖುಷಿ ಪ್ರದೇಶದಲ್ಲಿ ರಾಗಿ ಒಂದು ಪ್ರಮುಖ ಬೆಳೆಯಾಗಿದ್ದು, ಉತ್ತಮ ಇಳುವರಿ ಗಾಗಿ ಬರ ಮತ್ತು ಬೆಂಕಿ ರೋಗಕ್ಕೆ ನಿರೋಧಕತೆ ಹೊಂದಿರುವ ಎಂ.ಎಲ್- 365 ತಳಿಯನ್ನು ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಬೇಕೆಂದು ತಿಳಿಸಿದರು. ಮುಂದುವರೆದು, ತೊಗರಿಯಲ್ಲಿ ಅಧಿಕ ಇಳುವರಿ ಗಾಗಿ ಸೊರಗು ರೋಗಕ್ಕೆ ನಿರೋಧಕತೆ ಹೊಂದಿರುವ ಹಾಗೂ ಬೇಳೆಗೆ ಸೂಕ್ತವಾದ ಕೆಂಪು ಕಾಳಿನ ಬಿ.ಆರ್.ಜಿ-5 ತಳಿಯನ್ನು ಜೂನ್ ತಿಂಗಳಿನಲ್ಲಿ ಸಾಲಿನಿಂದ ಸಾಲಿಗೆ 5 ಅಡಿ ಅಂತರದಲ್ಲಿ ಬಿತ್ತನೆ ಮಾಡಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ವೈ.ಎಂ. ಗೋಪಾಲ್, ಡಾ. ಸುಪ್ರಿಯ, ಶ್ರೀ ಎನ್. ಜಗದೀಶ್, ಹಾಗೂ ಶ್ರೀಮತಿ ಲಾವಣ್ಯರವರು ಹಾಗೂ ಹೊಸಹಳ್ಳಿಯ ಗ್ರಾಮದ ಎಂ.ಪಿ.ಸಿ.ಎಸ್. ನ ಮಾಜಿ ಅಧ್ಯಕ್ಷರು ಹಾಗೂ ಪ್ರಗತಿಪರ ರೈತರಾದ ಶ್ರೀ ಲಕ್ಷ್ಮಿನಾರಾಯಣ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜಣ್ಣ ಹಾಗೂ ನಾಗರಾಜ ಮತ್ತು ಇತರೆ ರೈತ / ರೈತ ಮಹಿಳೆಯರು ಉಪಸ್ಥಿತರಿದ್ದರು.