ಕೆಂಪೇಗೌಡ ಜಯಂತೋತ್ಸವ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ.. ತಳಗವಾರ ಲಕ್ಷ್ಮಿ ನಾರಾಯಣ್

ದೊಡ್ಡಬಳ್ಳಾಪುರ :ಕೆಂಪೇಗೌಡರ ಜಯಂತೋತ್ಸವ ಪ್ರಯುಕ್ತ ಜೂನ್ 27ರ ಶುಕ್ರವಾರದಂದು ಬೆಳಿಗ್ಗೆ 9-30ಗಂಟೆಗೆ ನಗರದ ಶ್ರೀ ನೆಲದಾಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹಳೇ ಬಸ್ ನಿಲ್ದಾಣದ ಮೂಲಕ ಬೆಳ್ಳಿರಥದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆಯನ್ನು ದೊಡ್ಡಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ತಾಲ್ಲೂಕಿನ ಸಮಸ್ತ ಜನತೆಯೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ಹೊರಟು ತಾಲ್ಲೂಕು ಕಛೇರಿಯಲ್ಲಿ ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಶ್ರೀ ಕೆಂಪೇಗೌಡ ಜಯಂತ್ಯೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಟಿ ವಿ ಲಕ್ಷ್ಮಿ ನಾರಾಯಣ್ ತಿಳಿಸಿದರು.

ನಗರದ ಒಕ್ಕಲಿಗರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಹೆಸರಾಂತ ಜಾನಪದ ಕಲಾವಿದರ ತಂಡಗಳು ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನೆಡೆಸಿದ್ದು, ಮೆರವಣಿಗೆ ನಂತರ ಬೆಳಿಗ್ಗೆ 11-30 ರಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಕೆಂಪೇಗೌಡರ ಆದ್ಧೂರಿ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ.ಈ ಭವ್ಯ ಸಮಾರಂಭಕ್ಕೆ ತಾಲ್ಲೂಕಿನ ನಗರ ಮತ್ತು ಹಳ್ಳಿಗಳ ಪ್ರತಿ ಮನೆಯಿಂದ ಎಲ್ಲಾ ಕುಲಬಾಂಧವರು, ಎಲ್ಲಾ ಸಮುದಾಯದ ನಾಗರೀಕರು ಹಾಗೂ ಎಲ್ಲಾ ಇಲಾಖೆ ಅಧಿಕಾರಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮುಖಂಡರಾದ ತಿ.ರಂಗರಾಜು ಮಾತನಾಡಿ ನಾಡ ಪ್ರಭು ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ ಅವರು ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಬೆಂಗಳೂರಿನಂತಹ ಮಹಾ ನಗರವನ್ನು ಕಟ್ಟಿದವರು, ಈ ಕಾರ್ಯಕ್ರಮ ಕೇವಲ ಒಂದು ಸಮುದಾಯದ ಕಾರ್ಯಕ್ರಮವಲ್ಲ, ಈ ಕಾರ್ಯಕ್ರಮದಲ್ಲಿ ರಾಜಕೀಯ ಬಳಸದೆ ಪಕ್ಷತೀತವಾಗಿ ಎಲ್ಲಾ ನಾಯಕರು, ಪ್ರಮುಖರು ಒಮ್ಮನಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲು ನಾಯಕರ ಪಟ್ಟು

ನಮ್ಮ ಸಮುದಾಯವು ಹಲವು ವರ್ಷಗಳಿಂದ ನಮ್ಮ ತಾಲ್ಲೂಕಿನಲ್ಲಿ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡುತ್ತಿದ್ದರು ಈವರೆಗೂ ಯಾವುದೇ ಬೆಳವಣಿಗೆ ಕಂಡಿಲ್ಲ, ತಾಲ್ಲೂಕು ಪ್ರತಿನಿಧಿಗಳು, ತಾಲ್ಲೂಕು ಆಡಳಿತ ಹಾಗೂ ಸಮುದಾಯದ ಪ್ರಮುಖರಲ್ಲಿ ಈ ಮೂಲಕ ಪ್ರತಿಮೆ ಸ್ಥಾಪಿಸಲು ಒತ್ತಾಯಿಸುತ್ತಿದ್ದೇವೆ. ಅಲ್ಲದೇ ಈ ಬಾರಿ ಯಾವುದೇ ಕಾರಣಕ್ಕೂ ನಾವು ಭರವಸೆಗೆ ಬಲಿಯಾಗುವುದಿಲ್ಲ, ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಮಾಡಲೇ ಬೇಕು ಎಂಬುದು ನಮ್ಮೆಲ್ಲರ ಅಗ್ರಹವಾಗಿದ್ದು, ಈ ವರ್ಷ ಸ್ಥಳ ನಿಗದಿ ಮಾಡಿ ಗುದ್ದಲಿ ಪೂಜೆ ಮಾಡಿಸಿಯೇ ತಿರುತ್ತೇವೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮುದಾಯದ ಮುಖಂಡರಾದ ಕುರಿವಿಗೆರೆ ನರಸಿಂಹಯ್ಯ ಮಾತನಾಡಿ ಸಮುದಾಯದ ಬಂಧು – ಮಿತ್ರರು ಒಟ್ಟಾಗಿ ಸೇರಲು ಇದೊಂದು ಸುವರ್ಣ ಅವಕಾಶ, ನಮ್ಮ ಸಮುದಾಯದ ಕೀರ್ತಿ ಹೆಚ್ಚಿಸಿದ ಮಹಾ ನಾಯಕ, ನಾಡಪ್ರಭು ಕೆಂಪೇಗೌಡ ಜಯಂತೋತ್ಸವವನ್ನು ಎಲ್ಲರೂ ಒಟ್ಟಾಗಿ ಅದ್ದೂರಿಯಾಗಿ ಆಚರಿಸೋಣ, ಈ ಕಾರ್ಯಕ್ರಮವು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗದೆ ತಾಲ್ಲೂಕಿನ ಎಲ್ಲಾ ಸಮುದಾಯಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನ ಸಲ್ಲಿಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ರಾಜಘಟ್ಟ ಶಿವಣ್ಣ,ಕುರಿವಿಗೆರೆ ನರಸಿಂಹಯ್ಯ, ಶ್ರೀನಿವಾಸ ಗೌಡ ,ನಾಗೇಶ್ ಗೌಡ,ಮಂಡಿಬ್ಯಾಡರಳ್ಳಿ ಅಶ್ವಥ್ ನಾರಾಯಣ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ ವಿ ಲಕ್ಷ್ಮಿ ನಾರಾಯಣ, ಅಶ್ವತ್ ನಾರಾಯಣ, ಆನಂದ್ ಮೂರ್ತಿ,ಮೆಳೆಕೋಟೆ ಅಶೋಕ್ ಗೌಡ,ರತ್ನಮ್ಮ, ಲಕ್ಷ್ಮಮ್ಮ, ದೀಪು ಗೌಡ, ಶಾಂತಮ್ಮ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.