ಉದಯವಾಣಿ ಚಂದರಗಿಗೆ
ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ
ಬೆಂಗಳೂರು:ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಉದಯವಾಣಿಯ ಬೆಂಗಳೂರಿನ ವರದಿಗಾರ ವಿಜಯಕುಮಾರ್ ಚಂದರಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು, ಫಲಕವನ್ನು ಒಳಗೊಂಡಿದೆ.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಜುಲೈ 5 ರಂದು ಶನಿವಾರ ಬೆಳಗ್ಗೆ 10.30 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶೇಷಾದ್ರಿಪುರಂ ಕಾಲೇಜಿನಲ್ಲಿ ಸಮಾರಂಭ ನಡೆಯಲಿದೆ.
ವಿಜಯಕುಮಾರ ಚಂದರಗಿ ಮೂಲತಃ ಧಾರವಾಡ ಜಿಲ್ಲೆಯವರು. ಉತ್ಸಾಹಿ ಪತ್ರಕರ್ತ. ಶಿವಮೊಗ್ಗ ಸೇರಿದಂತೆ ಹಲವು ಕಡೆ ಕೆಲಸ ಮಾಡಿ ಈಗ ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ವರದಿಗಾರರಾಗಿ ಉತ್ತಮ ವರದಿಗಳನ್ನು ಬರೆದು ಗಮನ ಸೆಳೆದಿದ್ದಾರೆ.
ರೋಹಿತ್ ಮೂಲತಃ ತುಮಕೂರು ಜಿಲ್ಲೆ ಗ್ರಾಮೀಣ ಪ್ರದೇಶದಿಂದ ಬಂದ ಅತ್ಯಂತ ಪ್ರತಿಭಾವಂತ ಯುವ ಪತ್ರಕರ್ತ. ಚಿಕ್ಕವಯಸ್ಸಿನಲ್ಲೇ ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಆಂಗ್ಲ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ದುರ್ದೈವದಿಂದ ಅವರ ತೋಟದ ಬಾವಿಯಲ್ಲಿ ಈಜಲು ಹೋಗಿ ಅಕಾಲ ಮರಣಕ್ಕೆ ತುತ್ತಾದರು. ಅವರ ತಂದೆ-ತಾಯಿ ಶ್ರೀ ರಾಜಣ್ಣ ಮತ್ತು ಶ್ರೀಮತಿ ಲಲಿತಾ ಅವರು ತಮ್ಮ ಮಗನ ಹೆಸರಿನಲ್ಲಿ ಪ್ರತಿ ವರ್ಷ ಪತ್ರಿಕೋದ್ಯಮ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಬ್ಬರು ಯುವ ಪತ್ರಕರ್ತರಿಗೆ ಈ ಪ್ರಶಸ್ತಿ ಕೊಡ ಮಾಡಲಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್ ಸಂಸ್ಥೆಯ ಪರವಾಗಿ ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.