ಬಿರ್ಸಾ ಮುಂಡಾ ಅವರ ತತ್ವ ಚಿಂತನೆಗಳನ್ನು ಪಾಲಿಸಲು ಕರೆ: ಸಿ. ಮಾದೇಗೌಡ
ಚಾಮರಾಜನಗರ: ಆದಿವಾಸಿಗಳ ಹಕ್ಕು ಸಂರಕ್ಷಣೆಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಅಪ್ರತಿಮ ವೀರ ಬಿರ್ಸಾ ಮುಂಡಾ ಅವರ ಆದರ್ಶ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಾದೇಗೌಡ ತಿಳಿಸಿದರು.
ತಾಲ್ಲೂಕಿನ ಕುಳ್ಳೂರು ಗ್ರಾಮದಲ್ಲಿ ಸೋಲಿಗ ಅಭಿವೃದ್ಧಿ ಸಂಘದಿಂದ ಆಯೋಜಿಸಲಾಗಿದ್ದ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಬಿರ್ಸಾ ಮುಂಡಾ ಅವರ ನಾಮಫಲಕವನ್ನು ಅನಾವರಣಗೊಳಿಸಿ ಬಳಿಕ ಮಾತನಾಡಿದ ಅವರು ಶತ ಶತಮಾನಗಳಿಂದ ಅರಣ್ಯದಲ್ಲಿ ವಾಸಿಸುತ್ತಿದ್ದ ಆದಿವಾಸಿಗಳ ವಿರುದ್ಧ ಬ್ರಿಟಿಷರು ದೌರ್ಜನ್ಯ ಮತ್ತು ದಬ್ಬಾಳಿಕೆ ಏರಿ ಆದಿವಾಸಿ ಜನಾಂಗದ ಸಂಸ್ಕೃತಿ ಮತ್ತು ಪರಂಪರೆಗೆ ದಕ್ಕೆ ಉಂಟು ಮಾಡಿದ್ದರು. ಇದರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ ಬಿರ್ಸಾ ಮುಂಡಾ ಅವರು ಆದಿವಾಸಿ ಸಮಾಜಕ್ಕೆ ನ್ಯಾಯ ಕಲ್ಪಿಸಿ ಕೊಟ್ಟಿದ್ದಾರೆ ಹೀಗಾಗಿ ಅವರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕಾಗಿದೆ.
ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘವು ಕಳೆದ 28 ವರ್ಷಗಳಿಂದ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಹೋರಾಟ ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಹೀಗಿದ್ದರೂ ಕೂಡ ಗಿರಿಜನರನ್ನು ಒಕ್ಕಲೆಬ್ಬಿಸಲು ಸರ್ಕಾರ ಹುಲಿ ಯೋಜನೆ, ಮತ್ತು ವನ್ಯಜೀವಿ ದಾಮವನ್ನು ಜಾರಿಗೊಳಿಸಿ ತೊಂದರೆ ನೀಡುತ್ತಿದೆ, ಆದ್ದರಿಂದ ಪ್ರತಿಯೊಬ್ಬ ಗಿರಿಜನರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಅಲ್ಲದೆ ಗಿರಿಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹಾಗೂ ದುಶ್ಚಟಗಳಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.
ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಪುಟ್ಟಮ್ಮ ಮಾತನಾಡಿ, ಆದಿವಾಸಿ ಜನರಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ಕಲ್ಪಿಸುತ್ತಾ ಬಂದಿದೆ ಆದರೆ ಅದನ್ನು ಸಮರ್ಪಕವಾಗಿ ಪಡೆಯಲು ಶಿಕ್ಷಣದ ಕೊರತೆ ಕಾರಣವಾಗಿದೆ ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದರು.
ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಶಿವಣ್ಣ ಅವರು ಮಾತನಾಡಿ,ಕುಳ್ಳೂರು ಗ್ರಾಮದಲ್ಲಿ ಆದಿವಾಸಿ ಜನರಿಗೆ ರುದ್ರಭೂಮಿ ಹಾಗೂ ಸಮುದಾಯ ಭವನ ಇರುವುದಿಲ್ಲ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿರುವುದಿಲ್ಲ, ಇದಕ್ಕೆ ಮುಖ್ಯ ಕಾರಣ ನಮ್ಮ ಆದಿವಾಸಿ ಜನಾಂಗದಲ್ಲಿ ಸಂಘಟನೆಯ ಕೊರತೆ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂದು ತಿಳಿಸಿದರು.
ಇದಕ್ಕೂ ಮೊದಲು ಗಿರಿಜನರು ಆಕರ್ಷಕವಾಗಿ ಗುರೂಕನ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಅಟ್ಟುಗುಳಿಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ, ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಶಿವಣ್ಣ, ಮುಖಂಡರಾದ ಸಣ್ಣಕ್ಕಿಗೌಡ, ಸಿ.ಮಹದೇವ, ಮಹದೇವಯ್ಯ, ಸ್ವಾಮಿ, ಸಣ್ಣೇಗೌಡ, ಚಂದ್ರಪ್ಪ, ಎಂ.ಲಿಂಗೇಗೌಡ, ಜಡೇಗೌಡ, ಆಲಮ್ಮ, ಕಮಲಮ್ಮ, ಸಾಕಮ್ಮ, ಹನೂರು ಲ್ಯಾಂಪ್ಸ್ ನ ಚಂದ್ರಯ್ಯ, ನಂಜೇಗೌಡ ಹೊಸಫೋಡು ಮಾದೇಶ್ ಸೇರಿದಂತೆ ಇತರರಿದ್ದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ





