ಮನರೇಗಾ ಹೆಸರು ಬದಲಾವಣೆಯ ಬಿಜೆಪಿ ನಡೆ ಸರಿಯಲ್ಲ
ಬಿಜೆಪಿ ವಿರುದ್ದ ಆಕ್ರೋಶ : ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್ ಕಿಡಿ
ಹೊಸಕೋಟೆ:ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ಸರ್ಕಾರದ ನಡೆ ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಬಿಜೆಪಿ ವಿರುದ್ದ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಮಾಡಿ ಆರ್ಥಿಕವಾಗಿ ಸುಧಾರಣೆ ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ ಅಂದು ಪ್ರಧಾನ ಮಂತ್ರಿ ಆಗಿದ್ದ ಮನಮೋಹನ್ ಸಿಂಗ್ ಅವರು ಅನುಷ್ಠಾನ ಮಾಡಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ‘ವಿಬಿ ಜೀ ರಾಮ್ ಜೀ’ ಅಂತಾ ಬದಲಾವಣೆ ಮಾಡಿರುವುದು ಸರಿಯಲ್ಲ. ಬಿಜೆಪಿ ಅಂದ್ರೆ ಬ್ರಿಟಿಷ್ ಜನತಾ ಪಾರ್ಟಿ. ಒಡೆದು ಆಳುವ ಸಂಪ್ರದಾಯವನ್ನು ತಂದಿದ್ದಾರೆ. ಗೋಡ್ರೆ ಪ್ರೀತಿ ಮಾಡುವವರು, ಗೋಡ್ಲೆ ಪೂಜೆ ಮಾಡುವವರು. ಇವರಿಂದ ಏನು ನಿರೀಕ್ಷಿಸಲು ಸಾಧ್ಯ.
ಬಿಜೆಪಿಯವರಿಗೆ ಮಹಾತ್ಮ ಗಾಂಧಿ, ನೆಹರು ಬಗ್ಗೆ ವೈರತ್ವ, ದ್ವೇಷ ಇದೆ. ಹಾಗಾಗಿ, ದ್ವೇಷ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಯೋಜನೆ ದುರ್ಬಲಗೊಳಿಸುತ್ತಿದ್ದಾರೆ. ನರೇಂದ್ರ ಮೋದಿ ಪ್ರಥಮ ಭಾಷಣದಲ್ಲಿ ಮನರೇಗಾ ಕುರಿತು ಟೀಕೆ ಮಾಡಿದ್ದರು. ಮಹಾತ್ಮ ಗಾಂಧಿ ಹೆಸರಿನ ಬಗ್ಗೆ ಅವರಿಗೆ ಪ್ರೀತಿ, ಪ್ರೇಮ ಇಲ್ಲ. ಕಾರ್ಮಿಕ ವರ್ಗಕ್ಕೆ ಕೂಲಿ ಹಣ ಹೆಚ್ಚಾಗಲು ಈ ಯೋಜನೆ ಕಾರಣ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇದೆ. ಇದರ ಬಗ್ಗೆ ಹೋರಾಟವನ್ನು ಕಾಂಗ್ರೆಸ್ ಪಕ್ಷ ರೂಪಿಸಲಿದೆ ಎಂದರು.





