ಲಕ್ಷ್ಯ ಆಸ್ಪತ್ರೆಯಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ. ನೂರಾರು ಮಂದಿಗೆ ಉಚಿತ ತಪಾಸಣೆ

ವಿಜಯಪುರ: ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿರುವ ಲಕ್ಷ್ಯ ಆಸ್ಪತ್ರೆಯ ಆವರಣದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.
ಶಿಬಿರದಲ್ಲಿ ಉಚಿತವಾಗಿ ಎಕ್ಸ್ ರೇ, ಮಧುಮೇಹ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಕಣ್ಣುಗಳ ತಪಾಸಣೆ, ಇ.ಸಿ.ಜಿ, ಚರ್ಮರೋಗ, ಸ್ತ್ರೀರೋಗ ಶಾಸ್ತ್ರ,  ಜನರಲ್ ಮೆಡಿಸನ್, ಮೂಳೆ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ, ಸೇರಿದಂತೆ ವಿವಿಧ ರೋಗಗಳಿಗೆ ತಪಾಸಣೆ ನಡೆಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ಮಾಡಿಸಿಕೊಂಡರು. ಆರೋಗ್ಯ ತಪಾಸಣೆ ಮಾಡಿಸಿಕೊಂಡವರಿಗೆ ಲಕ್ಷ್ಯ ಆಸ್ಪತ್ರೆಯ ವತಿಯಿಂದ ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಿದರು.
ವೈದ್ಯ ಡಾ.ಮೋಹನ್ ದಾಸ್ ಉಳ್ತೂರು ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನರು, ಒತ್ತಡದ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಕೆಲಸ ಮಾಡುವಂತಹವರು ಅಸ್ತಮಾದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇತ್ತಿಚೆಗೆ ಜನರು, ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ರೋಗಗಳ ಪತ್ತೆಗಾಗಿ ಸಾವಿರಾರು ರೂಪಾಯಿಗಳು ಖರ್ಚು ಮಾಡಬೇಕಾದಂತಹ ಪರಿಸ್ಥಿತಿಯಿದೆ. ಇಂತಹ ಸಮಯದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವೈದ್ಯ ಡಾ.ಗಣೇಶ್ ಮಾತನಾಡಿ, ಜನರು, ತಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುತ್ತಿರುವುದರ ಜೊತೆಗೆ, ನಿಗದಿತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲವಾದ ಕಾರಣ, ಕೆಲವು ಕಾಯಿಲೆಗಳು ಗಂಭೀರವಾಗುತ್ತಿವೆ. ಇದರಿಂದ ಜನರು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿರುವುದರ ಜೊತೆಗೆ, ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳ ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನಹರಿಸಬೇಕು ಎಂದರು.
ವೈದ್ಯೆ ಡಾ.ರೇಷ್ಮಾ, ಡಾ.ಜಾನವಿ, ಡಾ. ಹರ್ಷವರ್ಧನ್, ದಾದಿಯರಾದ ರಂಜನಿ, ದೇವಿಕಾ, ಅನುಷಾ, ಚಾಂದಿನಿ, ಅಜಿತ್, ಇಸ್ರಾರ್, ಮುಂತಾದವರು ಹಾಜರಿದ್ದರು.