ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಎಂದಿಗೂ ಫಲಿಸಲಾರದೆ ಇರುವುದಿಲ್ಲ –ಎ.ಆರ್ ಹನೀಪುಲ್ಲಾ
ವಿಜಯಪುರ: ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಎಂದಿಗೂ ಫಲಿಸಲಾರದೆ ಇರುವುದಿಲ್ಲ. ವಿದ್ಯೆಯಿಂದ ಮಾತ್ರವೇ ನಾವು ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಲು ಸಾಧ್ಯವೇ ಹೊರತು, ಹಣದಿಂದ ಸಾಧ್ಯವಾಗುವುದಿಲ್ಲ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎ.ಆರ್.ಹನೀಪುಲ್ಲಾ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯ ವಿಭಾಗದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಯಾವುದೇ ಒಂದು ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲು ಸರಕಾರ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಉಳ್ಳವರ ಸ್ವತ್ತಾಗಿದ್ದ ಶಿಕ್ಷಣ, ಸಾಮಾನ್ಯರ ಮಕ್ಕಳಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ಇಂದು ಕಲ್ಪಿಸುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಸಾಧಕರಾಗುತ್ತೀರಿ, ನಾವು ಸಾಧಕರ ಪಟ್ಟಿಯನ್ನು ಗಮನಿಸಿದಾಗ, ಸರಕಾರಿ ಶಾಲೆಗಳಲ್ಲಿ ಓದಿವವರೇ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರೂ ಸಹಾ ಇದೇ ಶಾಲೆಯಲ್ಲಿ ಓದಿದ್ದು, ಇಂದು ಕೇಂದ್ರದಲ್ಲಿ 2 ಬಾರಿ ಸಚಿವರಾಗಿ, 7 ಬಾರಿ ಸಂಸದರಾಗಿ ಇಂದು, ರಾಜ್ಯದಲ್ಲಿ ಸಚಿವರಾಗಿದ್ದು, ಉತ್ತಮ ಉದಾಹರಣೆಯಾಗಿದ್ದಾರೆ. ನಿಮ್ಮಲ್ಲೂ ಐ.ಎ.ಎಸ್, ಐ.ಪಿ.ಎಸ್ ಮಾಡುವಂತಹ ಮಕ್ಕಳಿದ್ದೀರಿ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ, ಶಾಲೆಗೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ನಾವು ಸಿದ್ಧರಾಗಿದ್ದೇವೆ ಎಂದರು.
ಪುರಸಭೆ ಸದಸ್ಯೆ ವಿಮಲಾಬಸವರಾಜ್ ಮಾತನಾಡಿ, ಶಿಕ್ಷಣ ಪಡೆಯುವುದಕ್ಕೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಡಾ.ಬಿ.ಆರ್.ಅಂಬೇಡ್ಕರ್, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಅವರಂತಹ ಮಹನೀಯರು, ಬಡತನದಲ್ಲೆ ಹುಟ್ಟಿ ಬೆಳೆದು ಸಾಧಕರಾಗಿದ್ದಾರೆ. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ನಾನು ದ್ವಿತೀಯ ಪಿಯುಸಿ ಓದಿದ ನಂತರ, ಮದುವೆಯಾಗಿ, ಮಕ್ಕಳಾದ ಮೇಲೂ ಈಗಲೂ ಓದುತ್ತಿದ್ದೇನೆ. ವಕೀಲೆಯಾಗಿದ್ದೇನೆ. ನೀವು ಸಹಾ ಉತ್ತಮ ಸಾಧಕರಾಗಬೇಕು, ಶಿಕ್ಷಣಕ್ಕೆ ಮಾತ್ರವೇ ಸಮಾಜವನ್ನು ಪರಿವರ್ತನೆ ಮಾಡುವ ಶಕ್ತಿಯಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಿಕ್ಕನಹಳ್ಳಿ ವೆಂಕಟೇಶಪ್ಪ ಮಾತನಾಡಿ, ವಿಜಯಪುರದ ವಿದ್ಯಾರ್ಥಿನಿ ಭಾವನಾ ಅವರು, 625 ಕ್ಕೆ 625 ಅಂಕಗಳು ಗಳಿಸಿಕೊಂಡು, ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಆಕೆಯನ್ನೆ ನೀವು ಆದರ್ಶವಾಗಿ ತೆಗೆದುಕೊಂಡು, ನೀವು ಕೂಡಾ 625 ಕ್ಕೆ 625 ಅಂಕಗಳು ಗಳಿಸಿಕೊಂಡರೆ, ಎಷ್ಟು ಮಂದಿ ಗಳಿಸಿಕೊಳ್ಳುತ್ತಿರೋ ಅವರೆಲ್ಲರಿಗೂ ತಲಾ 1 ಲಕ್ಷದಂತೆ ಬಹುಮಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಬಾಕ್ಸ್
ಶಾಲೆಯ ಪಕ್ಕದಲ್ಲಿರುವ ಆಟದ ಮೈದಾನದಲ್ಲಿ, ಪ್ರತಿ ಶನಿವಾರದಂದು ಮೈಕ್ ಸೆಟ್ ಹಾಕಿಕೊಂಡು ಕ್ರಿಕೆಟ್ ಆಟವಾಡುತ್ತಾರೆ. ಇದರಿಂದ ದಿನವಿಡೀ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ತೊಡಕುಂಟಾಗುತ್ತಿದ್ದು, ಶನಿವಾರದಂದು ತರಗತಿಗಳು ನಡೆಯುವಾಗ ಯಾವುದೇ ಕ್ರೀಡಾಕೂಟಗಳನ್ನು ಆಯೋಜನೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕ ಬಿ.ಎಸ್.ನಾರಾಯಣ ಅವರು ಮನವಿ ಮಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ಸಮವಸ್ತ್ರಗಳನ್ನು ವಿತರಣೆ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಶ್ವಥ್, ಹಾಗೂ ಮಂಡಿಬೆಲೆ ದೇವರಾಜಪ್ಪ ಅವರು, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಉಪಪ್ರಾಂಶುಪಾಲ ಪಿ.ವೆಂಕಟೇಶ್, ಪುರಸಭೆ ಸದಸ್ಯ ಎಂ.ನಾರಾಯಣಸ್ವಾಮಿ, ಎಂ.ರಾಜಣ್ಣ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಬೇಕರಿ ಆನಂದಪ್ಪ, ಶಾಲಾ ಶಿಕ್ಷಕರು ಹಾಜರಿದ್ದರು.
ವಿಜೆಪಿ 01: ವಿಜಯಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ವಿಭಾಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ವಿತರಣೆ ಮಾಡಿದರು.