ವಾಮಾಚಾರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೈರಾಪುರ ತಾಂಡದ ಗ್ರಾಮಸ್ಥರು

ದೊಡ್ಡಬಳ್ಳಾಪುರ :ವಿಜ್ಞಾನ ಮುಂದುವರೆದಿರುವ 21ನೇ ಶತಮಾನದಲ್ಲೂ ಜನರಲ್ಲಿ ಮೂಢನಂಬಿಕೆ ಹೋಗಿಲ್ಲ, ಇದಕ್ಕೆ ಪುಷ್ಠಿ ನೀಡುವಂತೆ ಅಮಾವಾಸ್ಯೆ ಹುಣ್ಣಿಮೆಗಳ ಸಂದರ್ಭದಲ್ಲಿ ತಾಲ್ಲೂಕಿನ ಬೈರಾಪುರ ತಂಡದ ಕೆಲ ಕಿಡಿಗೇಡಿಗಳು
ಮನೆಗಳ ಮುಂದೆ ಅಕ್ಕಿಕಾಳು,ನಿಂಬೆಹಣ್ಣು, ಕುಂಕುಮ ಇಟ್ಟು ಗ್ರಾಮಸ್ಥರನ್ನು ಭಯಪಡಿಸಲು ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ತಾಂಡದಲ್ಲಿ ಮಾಟ- ಮಂತ್ರದ ಹಾವಳಿ ಜೋರಾಗಿದೆ, ಗ್ರಾಮದ ಮುನಿಶಾಮ ನಾಯ್ಕ್ ಎಂಬವರ ಮನೆ ಮುಂದೆ ವಾಮಾಚಾರ ಮಾಡಲಾಗಿದ್ದು, ಬೆಳಗ್ಗೆದ್ದು ನೋಡಿದಾಗ ಮನೆ ಮುಂದೆ ಅಕ್ಕಿಕಾಳು, ನಿಂಬೆಹಣ್ಣು, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪೇಪರ್ ನಲ್ಲಿ ಪತ್ತೆಯಾಗಿವೆ. ಇದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಹೌದು ಮಾಟ- ಮಂತ್ರದ ಹಾವಳಿಯಿಂದ ಬೈರಾಪುರ ತಂಡದ ಗ್ರಾಮಸ್ಥರು ಆತಂಕದ ವಾತಾವರಣದಲ್ಲಿ ಜೀವಿಸುವಂತಗಿದೆ

ಘಟನೆ ಕುರಿತು ಗ್ರಾಮಸ್ಥರಾದ ಮುನಿಶಾಮ ನಾಯ್ಕರವರ ಪುತ್ರ ಮಂಜುನಾಥ್ ಮಾತನಾಡಿ ಬೈರಾಪುರ ತಾಂಡದಲ್ಲಿ ವಯಸ್ಸಾದ ನಮ್ಮ ತಂದೆ ತಾಯಿ ವಾಸವಾಗಿದ್ದಾರೆ. ಯಾರೋ ದುಷ್ಕರ್ಮಿಗಳು ನಮ್ಮನ್ನು ವೈಯಕ್ತಿವಾಗಿ ಗುರಿಯಾಗಿಸಿಕೊಂಡು ನಮ್ಮ ಮನೆ ಬಳಿ ನಿಂಬೆಹಣ್ಣು, ತಾಯತ, ಅರಿಶಿಣ, ಕುಂಕುಮ, ಹೂ, ಮೂಳೆ, ರಕ್ತವನ್ನು ಚೆಲ್ಲಿ ಮಾಟ ಮಂತ್ರ ಮಾಡಿ ಮಾನಸಿಕವಾಗಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಗ್ರಾಮದಲ್ಲಿ ನಡೆಯುತ್ತಿದ್ದ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಿದ್ದೆ. ಅಂದಿನಿಂದ ಈ ರೀತಿಯಾದಂತಹ ಕೃತ್ಯಗಳು ನಮಗೆ ಕಂಡುಬರುತ್ತಿವೆ. ನಾವು ಯಾರಿಗೂ ಯಾವುದೇ ರೀತಿಯ ಮೋಸ, ಅನ್ಯಾಯ ಮಾಡಿಲ್ಲ. ನಮ್ಮ ಪೋಷಕರಿಗೆ ವಯಸ್ಸಾಗಿದೆ. ಇಬ್ಬರೇ ಊರಲ್ಲಿ ವಾಸವಾಗಿದ್ದಾರೆ. ನಾವು ನಗರದಲ್ಲಿ‌ ವಾಸ ಇದ್ದೇವೆ . ಅಮಾವಾಸ್ಯೆ ಬಂದರೆ ಮನೆಯ ಮುಂದೆ ವಾಮಾಚಾರ ಕೃತ್ಯಗಳನ್ನ ನಡೆಸುತ್ತಿದ್ದಾರೆ, ನಮ್ಮನ್ನು ಬೆದರಿಸುವ ಮೂಲಕ ಗ್ರಾಮದಿಂದ ನಮ್ಮನ್ನು ಹೊರ ಹಾಕುವ ಕೃತ್ಯವನ್ನ ಕಿಡಿಗೇಡಿಗಳು ನಡೆಸುತ್ತಿದ್ದಾರೆ ಎಂದರು.

ಕೇವಲ ನಮ್ಮ ಕುಟುಂಬಕ್ಕೆ ಮಾತ್ರ ಕಿರುಕುಳ ನೀಡುತ್ತಿಲ್ಲ, ಗ್ರಾಮದ ಬಹುತೇಕ ಕುಟುಂಬಗಳಿಗೆ ವಾಮಾಚಾರವನ್ನ ಕಿಡಿಗೇಡಿಗಳು ಮಾಡುತ್ತಿದ್ದಾರೆ, ಇದರಿಂದ‌ ಗ್ರಾಮಸ್ಥರಲ್ಲಿ ಆತಂಕ‌ ಮನೆ ಮಾಡಿದೆ ವಾಮಾಚಾರದ ಹಾವಳಿ ಪ್ರಾರಂಭವಾದ ನಂತರಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ , ಕಿಡಿಗೇಡಿಗಳಿಗೆ ಕಡಿವಾಣ ಹಾಕದಿದ್ದಾರೆ, ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ, ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.

ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ, ತನಿಖೆ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ.