ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ, ಮಾಸ್ತಿ ವೆಂಕಟೇಶ ಅಯ್ಯಂಗಾರ್
ವಿಜಯಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಟೌನ್ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಆಚರಣೆ ಮಾಡಿದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ, ಪುಷ್ಪನಮನ ಸಲ್ಲಿಸಿ, ಅವರಿಗೆ ಗೌರವ ಸಲ್ಲಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಕನ್ನಡನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು, ಮಾಸ್ತಿಯವರ ಲೇಖನಿಯಲ್ಲಿ ಸಣ್ಣಕಥೆ, ಕಾವ್ಯ, ನಾಟಕ, ಕಾದಂಬರಿ, ಜೀವನ ಚರಿತ್ರೆ, ವಿಮರ್ಶೆ, ಅನುವಾದ ಸಾಹಿತ್ಯ, ಸಂಪಾದಕೀಯದಂತಹ ವೈವಿಧ್ಯಮಯವಾದ ಸಾಹಿತ್ಯ ಸೃಷ್ಟಿಯಾಯಿತು. ಕನ್ನಡಕ್ಕೆ ಅವರ ಸೇವೆ ಸದಾ ಅನುಪಮವಾದದ್ದು ಎಂದರು.
ಟೌನ್ ಕಸಾಪ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಮಾತನಾಡಿ, ಮಾಸ್ತಿ ಅವರು ಸಣ್ಣಕಥೆಗಳ ಹರಿಕಾರರಾಗಿ ಹಳ್ಳಿಯ ಬದುಕು, ರೈತ, ಪರಿಸರ, ಜನರ ಸಂಸ್ಕೃತಿ ಆಚಾರ-ವಿಚಾರದ ಬಗ್ಗೆ ಬಿಂಬಿಸಿದ್ದಾರೆ. ಇಂದಿನ ಜನತೆಗೆ ತಮ್ಮ ಬದುಕು ಕಟ್ಟಿಕೊಳ್ಳಲು ಮಾಸ್ತಿ ಅವರ ಸಾಹಿತ್ಯ ಪ್ರೇರಣೆಯಾಗಬೇಕು. ಅವರ ಸಾಹಿತ್ಯ ನಮ್ಮ ನಿಜವಾದ ಆಸ್ತಿ, ಮಾಸ್ತಿ ಕನ್ನಡದ ಆಸ್ತಿ ಎಂಬ ಮಾತು ನಿಜವಾಗಬೇಕಾದರೆ ಪ್ರತಿಯೊಬ್ಬ ಪ್ರಜೆ, ಸಾಹಿತಿಗಳು ಮಾಸ್ತಿಯವರ ಸಾಹಿತ್ಯವನ್ನು ಓದಿ ತಮ್ಮ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಆರ್.ಕೆ.ನಂಜೆಗೌಡ, ಹೋಬಳಿ ಘಟಕದ ಅಧ್ಯಕ್ಷ ಮಹೇಶ್ ಕುಮಾರ್, ಹೋಬಳಿ ಕೋಶಾಧ್ಯಕ್ಷ ಕನಕರಾಜು, ಪುರಸಭೆ ಸದಸ್ಯರಾದ ಬೈರೇಗೌಡ, ಎಂ.ನಾರಾಯಣಸ್ವಾಮಿ, ಸಿ.ಎಂ.ರಾಮು, ಮುಖಂಡರಾದ ಶರಣಯ್ಯ ಹಿರೇಮಠ್, ಎಸ್.ಆರ್.ಎಸ್.ಬಸವರಾಜ್, ಅಶ್ವಥಗೌಡ, ಎಸ್.ಮಂಜುನಾಥ್, ಜೆ.ಆರ್.ಮುನಿವೀರಣ್ಣ, ಚತ್ರಪತಿಮಹೇಶ್, ಮಾ.ಸುರೇಶ್ ಬಾಬು, ಮುಂತಾದವರು ಹಾಜರಿದ್ದರು.
ವಿಜೆಪಿ 03: ವಿಜಯಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಅಂಗವಾಗಿ ಕವಿ.ಮಾ.ಸುರೇಶ್ ಬಾಬು ಅವರನ್ನು ಸನ್ಮಾನಿಸಿದರು.