ಕೆ. ವಿ. ಕೆ. ವತಿಯಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ

ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ಸಾಸಲು ಹೋಬಳಿ ಕೊಟ್ಟಿಗೆ ಮಾಚೇನಹಳ್ಳಿ ದತ್ತು ಗ್ರಾಮದಲ್ಲಿ ನೂತನ ತಾಂತ್ರಿಕ ತರಬೇತಿ ಕಾರ್ಯಕ್ರಮದಡಿ, ರೈತ ಫಲಾನುಭವಿಗಳಿಗೆ ರಾಗಿ (ತಳಿ: ಎಂ.ಎಲ್-365) ಮತ್ತು ತೊಗರಿ (ತಳಿ: ಬಿ.ಆರ್.ಜಿ-5) ಬಿತ್ತನೆ ಬೀಜ ವಿತರಿಸಲಾಯಿತು.

ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ. ಹನುಮಂತರಾಯ ಮಾತನಾಡಿ, ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮವನ್ನು 2025-26ನೇ ಸಾಲಿನಿಂದ ಮುಂದಿನ ಮೂರು ವರ್ಷ ಬೆಂಗಳೂರಿನ ಕೃಷಿ ವಿವಿ ಅನುದಾನದಡಿ ದತ್ತು ಗ್ರಾಮವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಗ್ರಾಮ ದತ್ತದಲ್ಲಿ ಕೃಷಿ ಪೂರಕ ಚಟುವಟಿಕೆಗಳಾದ ಮುಂಚೂಣಿ ಪ್ರಾತ್ಯಕ್ಷಿಕೆ, ಕ್ಷೇತ್ರ ಪ್ರಯೋಗ,ಶೈಕ್ಷಣಿಕ ಪ್ರವಾಸ ಹಾಗೂ ಇತರೆ ವಿಸ್ತರಣಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಹೀ ಗಾಗಿ ಒಟ್ಟು 110 ರೈತ ಫಲಾನುಭವಿಗಳಿಗೆ ರಾಗಿ, ತೊಗರಿ ಬಿತ್ತನೆ ವಿತರಿಸಲಾಗುತ್ತಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮಣ್ಣುವಿಜ್ಞಾನಿ ಡಾ.ಪಿ. ವೀರನಾಗಪ್ಪ ಮಾತನಾಡಿ, 1 ಕಿ.ಗ್ರಾಂ. ರಾಗಿ ಬಿತ್ತನೆ ಬೀಜಕ್ಕೆ 200 ಗ್ರಾಂ. ಅಜೋಸ್ಪಿರಿಲ್ಲಮ್ ಜೀವಾಣುವಿನಿಂದ ಬೀಜೋಪಚಾರ ಮಾಡಬೇಕು. 1 ಕಿ.ಗ್ರಾಂ. ತೊಗರಿ ಬಿತ್ತನೆ ಬೀಜಕ್ಕೆ 200 ಗ್ರಾಂ ರೈಜೋಬಿಯಂ ಜೀವಾಣುವಿನಿಂದ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು. ಹಿರಿಯ ತಾಂತ್ರಿಕ ಅಧಿಕಾರಿ ಎನ್. ಜಗದೀಶ್ ತೊಗರಿ ಮತ್ತು ರಾಗಿ ಬಿತ್ತನೆ ಬೀಜದ ಬೀಜೋಪಚಾರ ತೋರಿಸಿಕೊಟ್ಟರು. ಕೇಂದ್ರದ ವಿಜ್ಞಾನಿಗಳಾದ ಡಾ.ವೈ.ಎಂ.ಗೋಪಾಲ್, ಡಾ. ಸುಪ್ರಿಯ, ಲಾವಣ್ಯ, ಕೊಟ್ಟಿಗೆ ಮಾಚೇನಹಳ್ಳಿ ಗ್ರಾಪಂ ಸದಸ್ಯ ಆನಂದ್, ಪ್ರಗತಿಪರ ರೈತ ನಾಗರಾಜ ಹಾಗು ಸಾರ್ವಜನಿಕರು ಇದ್ದರು.