ರಾಸಾಯನಿಕ ನೀರಿನ ಕಾಲುವೆ ಮುಚ್ಚದಿದ್ದರೆ ಎಲ್ಲಾ ಕಾಲುವೆಯನ್ನು ಬಂದ್ ಮಾಡುತ್ತೇವೆ.. ಅರ್ಕಾವತಿ ನದಿ ಹೋರಾಟ ಸಮಿತಿ ಎಚ್ಚರಿಕೆ

ದೊಡ್ಡಬಳ್ಳಾಪುರ: ಮುಂದಿನ 15 ದಿನದೊಳಗೆ ಸರ್ಕಾರಿ ಅಧಿಕಾರಿಗಳು ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳಿಗೆ ಬಿಡುತ್ತಿರುವ ರಾಸಾಯನಿಕ ನೀರಿನ ಕಾಲುವೆಯನ್ನು ಮುಚ್ಚದಿದ್ದರೆ ಹೋರಾಟ ಸಮಿತಿಯಿಂದ ಎಲ್ಲಾ ಕಾಲುವೆಗಳನ್ನು ಸಂಪೂರ್ಣ ಮುಚ್ಚಲಾಗುವುದು ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಮುಖಂಡ ವಸಂತ್ ಕುಮಾರ್ ಎಚ್ಚರಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕೆಐ ಡಿಬಿ ವ್ಯಾಪ್ತಿಯ ಕಾರ್ಖಾನೆಗಳು ಮತ್ತು ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಿಂದ ತ್ಯಾಜ್ಯದ ನೀರನ್ನು ಸಂಸ್ಕರಿಸದೆ ನೇರವಾಗಿ ನಮ್ಮ ಕೆರೆಗಳಿಗೆ ಬಿಡಲಾಗುತ್ತಿದ್ದು, ಇದಕ್ಕೆ ಸಂಬಂದಿಸಿದಂತೆ ಕಳೆದ 10 ವರ್ಷಗಳಿಂದ ಹೋರಾಟ ಮಾಡಲಾಗಿದೆ. ಈಗಾಗಲೇ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಆಯುಕ್ತರಿಗೂ, ದೊಡ್ಡಬಳ್ಳಾಪುರ ನಗರಸಭೆಯ ಆಯುಕ್ತರಿಗೂ, ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೂ ದೂರು ನೀಡಿದರೂ ಸಾಲು ಸಾಲು ಸಭೆ ಮಾಡಿದರೂ ವಿಷದ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ.

ಕಾನೂನು ವಿರುದ್ಧವಾಗಿ, ಸಂವಿಧಾನದ ವಿರುದ್ಧವಾಗಿ ರಾಸಾಯನಿಕ ನೀರನ್ನು ಕೆರೆಗಳಿಗೆ ಹರಿಸಿ ನಮ್ಮ ಮೂಲಭೂತ ಹಕ್ಕಾದ ಕುಡಿಯುವ ನೀರಿಗೆ ತೊಂದರೆ‌ ಮಾಡಿದ್ದಾರೆ.

ಗೌರವಾನ್ವಿತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಧಾನ ಪೀಠ, ದಿನಾಂಕ 24.05.2019 ರಂದು O.A. ನಂ. 348/2017 ರಲ್ಲಿ ಕೃಷಿ/ತೋಟಗಾರಿಕೆಗೂ ಸಹಿತ ಸಂಸ್ಕರಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಾರ್ಖಾನೆಗಳಿಗೆ ಅನುಮತಿ ನೀಡಬಾರದು ಎಂಬ ಆದೇಶವಿದ್ದರೂ ಅದನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ತೋಟಗಾರಿಕೆಗೆ ಬಳಸಬಾರದು ಎಂದು ಆದೇಶ ಮಾಡಿದರು. ಇನ್ನೂ ಕೆರೆಗಳಿಗೆ ಹರಿಸುತ್ತಿರುವ ವಿಡಿಯೋ ಸಮೇತ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಆದ್ದರಿಂದ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಹಾಗೂ ಪರಿಸರದ ದೃಷ್ಟಿಯಿಂದ ಜೀವಜಲವನ್ನು ರಕ್ಷಿಸಿಕೊಳ್ಳಲು ರಾಸಾಯನಿಕ ಹರಿಯುವ ನಾಲ್ಕು ಕಾಲುವೆಯನ್ನು ಕಾನೂನಿನ ಉಳಿವಿಗಾಗಿ ಸಂವಿಧಾನದ ರಕ್ಷಣೆಗಾಗಿ ಮುಚ್ಚಲು ಅರ್ಕಾವತಿ ನದಿ ಹೋರಾಟ ಸಮಿತಿಯು ತೀರ್ಮಾನಿಸಿದೆ ಎಂದರು.

ನಂತರ ವಕೀಲ‌ ಸತೀಶ್ ಮಾತನಾಡಿ ದೊಡ್ಡ ತುಮಕೂರು, ಮಜುರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಗಳ ಅಂತರ್ಜಲ ವಿಷವಾಗಿರುವುದು ನೂರಕ್ಕೆ ನೂರರಷ್ಟು ಸತ್ಯ. ತಹಶೀಲ್ದಾರ್ , ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮಕ್ಕೆ ತಂದರೂ , ಲಿಖಿತ ದೂರು ನೀಡಿದರೂ, ಪ್ರತಿಭಟನೆ ಮಾಡಿದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ. ಅದರಲ್ಲಿ ಬಹು ಮುಖ್ಯ ವಾಗಿ ವಿಷದ ನೀರನ್ನು ಇಂಡಿಗೋ ಕಾರ್ಖಾನೆ ಮುಂದೆ ಇರುವ ಕಾಲುವೆ
ನಗರಸಭೆಯ ನೀರು ಚಿಕ್ಕ ತುಮಕೂರು ಕೆರೆಗೆ ಬರುವ ತಿಪ್ಪಾಪುರ ರಸ್ತೆಯಲ್ಲಿ ಬರುವ ಕಾಲುವೆಯನ್ನು,

ಇಂಡಿಕ್ ಕಂಪನಿ ಮುಂದೆ ಇರುವ ಕಾಲುವೆ.

ಭಾಶೆಟ್ಟಿಹಳ್ಳಿ ಕೆರೆಯಿಂದ ಚಿಕ್ಕತುಮಕೂರು ಕೆರೆಗೆ ಬರುವ ರಾಜಕಾಲುವೆ ಜಿ ಪಿ ಪ್ಯಾಲೇಸ್ ಪಕ್ಕ

ಈ‌ ಎಲ್ಲಾ ಕಾಲುವೆಗಳನ್ನು ಅದಿಕಾರಿಗಳು ತಕ್ಷಣವೇ ನಿಲ್ಲಸದಿದ್ದರೆ ನಾವೇ ಸಂಪೂರ್ಣ ಮುಚ್ಚಲಾಗುವುದು ಎಂದರು.

ನಂತರ ಮುಖಂಡ ಎಲ್ ಐ ಸಿ ಮಂಜುನಾಥ್ ಮಾತನಾಡಿ
ತಂತ್ರಜ್ಞಾನ ಇಷ್ಟು ಮುಂದುವರೆದಿದ್ದರೂ ಕಳೆದ ಹತ್ತು ವರ್ಷಗಳಿಂದ ಈ ಭಾಗದ ಕಾರ್ಖಾನೆಗಳು ಯಾವುದೇ ಶುದ್ಧೀಕರಣ ಮಾಡದೆ ಮನಸೋ ಇಚ್ಚೆ ನೇರವಾಗಿ ಕಲುಷಿತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ. ಈಗಾಗಲೇ ಅನೇಕ ಪ್ರತಿಭಟನೆಗಳು, ದರಣಿ ಸತ್ಯಾಗ್ರಹ ನಡೆದರು ಅಧಿಕಾರಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ.
ಎರಡು ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಸಂಪೂರ್ಣ ವಿಷ ವಾಗಿದ್ದು ಇನ್ನು ಕೆರೆ ಕುಂಟೆಗಳಲ್ಲಿ ನೀರನ್ನು ಹೇಳಲಾಗದು. ಕಾರ್ಖಾನೆಗಳಲ್ಲಿ ಬಿಡುತ್ತಿರುವ ನೀರಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿದ್ದು ಅಂತಕವಾಗಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕಾರ್ಖಾನೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಈ ಕಾಲುವೆಗಳನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದರು.

ಮುಖಂಡರಾದ ಮೂರ್ತಿದೊಂಬರಹಳ್ಳಿ, ಗೋಪಾಲ್, ವಿಜೀಕುಮಾರ್, ನರಸಿಂಹ ಮೂರ್ತಿ, ರಮೇಶ್, ಅಂಜೀನಪ್ಪ, ಸುವಂತಪ್ಪ ಇದ್ದರು.