ಉಗ್ರಪ್ಪ ಸಮಿತಿಯ ವರದಿಯನ್ನು ಯಾವುದೇ ಸರ್ಕಾರಗಳು ಪರಿಗಣಿಸಿಲ್ಲ.. ಚಂದ್ರು ತೇಜಸ್ವಿ

ದೊಡ್ಡಬಳ್ಳಾಪುರ : ಉಗ್ರಪ್ಪ ಅವರ ಸಮಿತಿ ನೀಡಿದ ಶಿಫಾರಸ್ಸುಗಳನ್ನು ಯಾವುದೇ ರಾಜಕೀಯ ಪಕ್ಷಗಳು ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯ ಸಂಚಾಲಕ ಆರ್‌.ಚಂದ್ರತೇಜಸ್ವಿ ಆರೋಪಿಸಿದರು.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮಹಿಳೆಯರು, ಯುವತಿಯರ ಮೇಲಿನ ಅತ್ಯಚಾರ, ಕೊಲೆ ಮತ್ತು ನಿಗೂಢ ಕಣ್ಮರೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು 2016 ರಲ್ಲಿ ಸರ್ಕಾರ
ವಿ.ಎಸ್.ಉಗ್ರಪ್ಪ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿತ್ತು. 2018 ರಲ್ಲಿ ಸಮೊತಿಯು 300 ಕ್ಕೂ ಹೆಚ್ಚು ಶಿಫಾರಸುಗಳನ್ನು ಮಾಡಿತ್ತು. ಆದರೆ, ಆಳುವ ಸರ್ಕಾರಗಳು ಅದನ್ನು ಮೂಲೆಗೆ ಎಸೆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಉಗ್ರಪ್ಪ ಸಮಿತಿಯ ಸದಸ್ಯರಾಗಿದ್ದ ಪ್ರಭ ಬೆಳವಂಗಲ ಅವರು ಮಾತನಾಡಿ, ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಸೌಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಧರ್ಮಸ್ಥಳ ಸುತ್ತಮುತ್ತ ನೂರಾರು ಅಸಹಜ ಸಾವುಗಳು ಸಂಭವಿಸುತ್ತಿರುವ ಕುರಿತು ವರದಿಗಳಾಗಿದ್ದವು. ಅದರಲ್ಲಿ ಉಜಿರೆ ಸಮೀಪದ ಪಾಂಗಳದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಮತ್ತು ಅದನ್ನು ಮುಚ್ಚಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನಗಳು ಮರೆಯಲಾರದ ಸಂಗತಿಗಳು. ಅಮಾಯಕನೊಬ್ಬನನ್ನು ಆರೋಪಿ ಎಂದು ಹೆಸರಿಸಿ ಜೈಲಿಗೆ ಹಾಕಿದ್ದು, ದುರುದ್ದೇಶಪೂರ್ವಕವಾಗಿ ಸಾಕ್ಷಿ ನಾಶಮಾಡಿದ್ದರ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿ, ತನಿಖೆ ನಡೆದು ಸಿಬಿಐ ನ್ಯಾಯಾಲಯದ ತೀರ್ಪು ಕೂಡ ಹೊರ ಬಂದಿದೆ. ತೀರ್ಪಿನ ಅನುಸಾರವಾಗಿ ಅಮಾಯಕನೆಂದು ಇಡೀ ರಾಜ್ಯ ಗಟ್ಟಿ ಧ್ವನಿಯಲ್ಲಿ ಹೇಳಿದ ವ್ಯಕ್ತಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ.

ಅದೇ ವೇಳೆಗೆ ಪ್ರಾಥಮಿಕ ಹಂತದಲ್ಲಿ ತನಿಖಾಧಿಕಾರಿಗಳು, ಶವಪರೀಕ್ಷೆ ಮಾಡಿದ ವೈದ್ಯಾಧಿಕಾರಿಗಳು ಉದ್ದೇಶಪೂರ್ವಕವಾಗಿ ಸಾಕ್ಷಿ ನಾಶ ಮಾಡಿದ್ದು, ಅವರ ಮೇಲೆ ಕ್ರಮ ಕೈಗಳ್ಳಬೇಕೆಂದೂ ಸಿಬಿಐ ನ್ಯಾಯಾಲಯ ಸೂಚನೆ ನೀಡಿತ್ತು. ಆದರೆ ಸರಕಾರ ಈ ಬಗ್ಗೆ ಹೆಚ್ಚೇನು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಈಗ ಧರ್ಮಸ್ಥಳ ಮಂಜುನಾಥ ದೇವಾಲಯದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದವನಾಗಿದ್ದು, ಆ ಅವಧಿಯಲ್ಲಿ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಮತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ. ಇದು ಇಡೀ ಪ್ರಕರಣದಲ್ಲಿ ಈ ಮೊದಲೇ ಸಾಮಾಜಿಕ ಕಳಕಳಿಯ ಸಂಘಟನೆಗಳು. ವ್ಯಕ್ತಿಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರವಾಗಿದೆ. ಆದರೆ, ಸಾಕ್ಷಿ. ದೂರುದಾರನ ಹೇಳಿಕೆಯ ನಂತರ ಕ್ಷಿಪ್ರಗತಿಯಲ್ಲಿ ಸರಕಾರವೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಇದೇ ವೇಳೆಗೆ ಮೆಡಿಕಲ್‌ ವಿದ್ಯಾರ್ಥಿನಿಯೊಬ್ಬರು ಏಕಾಏಕಿ ಕಾಣೆಯಾಗಿದ್ದ ಪ್ರಕರಣದ ಸಂತ್ರಸ್ಥ ತಾಯಿಯೊಬ್ಬರು ಹೂತ ಹೆಣಗಳಲ್ಲಿ ತನ್ನ ಮಗಳ ದೇಹವೂ ಇರಬಹುದಾಗಿದ್ದು, ಎತ್ತಿದ ಹೆಣಗಳ ಡಿಎನ್‌ಎ ಪರೀಕ್ಷೆ ನಡೆಸಿ, ಖಚಿತವಾದಲ್ಲಿ ತಮ್ಮ ಸಂಪ್ರದಾಯದಂತೆ ಸಂಸ್ಕಾರ ಮಾಡಿಸುವುದಾಗಿ ಪ್ರಕರಣ ದಾಖಲಿಸಿದ ಘಟನೆಯೂ ನಡೆದಿದೆ. ಇದೇ ಸಮಯದಲ್ಲಿ ತಾನೇ ಸ್ವತಃ ಹೂಳಿರುವುದಾಗಿ ದೂರು ನೀಡಿರುವ ಸಾಕ್ಷಿ ಫಿರ್ಯಾದುದಾರರು ಹೂತಿರುವ ಕಳೇಬರವನ್ನು ತೆಗೆಯುವುದಾಗಿ ಹೇಳಿದ್ದರೂ, ‘ಅವುಗಳ ಬಗ್ಗೆ ಪೋಲೀಸರು ಆಸಕ್ತಿ ತೋರಿಸುತ್ತಿಲ್ಲ ಎಂಬುದಾಗಿ ವರದಿಗಳು ಬರುತ್ತಿವೆ. ಪ್ರಕರಣದ ಸರಿಯಾದ ತನಿಖೆಗೆ ಆಸಕ್ತಿ ತೋರಿಸದೇ, ದೂರುದಾರರ ಮಂಪರು ಪರೀಕ್ಷೆ ಮಾಡಲು ಅನುಮತಿ ಕೋರುವುದಾಗಿ ಜಿಲ್ಲಾ ಪೊಲೀಸರು ಹೇಳುತ್ತಿರುವುದು ನಮಗೆ ಆಶ್ಚರ್ಯ ಉಂಟು ಮಾಡಿದೆ. ಇವು ಪ್ರಾರಂಭದಿಂದಲೂ ಯಾರನ್ನೋ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎದ್ದಿರುವ ಅನುಮಾನಗಳನ್ನು ದೃಢಪರಿಸುತ್ತಿವೆ ಎಂದರು.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ, ಸಾಕ್ಷಿ ದೂರುದಾರರ ದೂರಿನನ್ವಯ ಸೌಜನ್ಯ ಪ್ರಕರಣವೂ ಸೇರಿದಂತೆ ಅಸಹಜಸಾವೆಂದು ಪರಿಗಣಿಸಿ ಮೂಲಗೆ ತಳ್ಳಲ್ಪಟ್ಟ ಎಲ್ಲ ಪ್ರಕರಣಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಮರು ತನಿಖೆ ಮಾಡಬೇಕು. ತನಿಖೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆದು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ವಿಶೇಷ ತನಿಖೆಗೆ ಆದೇಶಿಸಬೇಕು. ತಾನೇ ಸ್ವತಃ ಹೂತಿರುವ ಕಳೆಬರವನ್ನು ತೆಗೆಯುವುದಾಗಿ ಸಾಕ್ಷಿ ದೂರುದಾರ ಹೇಳಿದ್ದಾರೆ. ಆದ್ದರಿಂದ ಕೂಡಲೇ ಕಳೆಬರವನ್ನು ಹೊರತೆಗೆದು ಸತ್ಯವನ್ನು ಹೊರಗೆಳೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಬಿಐ ನ್ಯಾಯಾಲಯದ ಆದೇಶದಂತೆ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿನಾಶಕ್ಕೆ ಕಾರಣರಾದ ಮತ್ತು ತನಿಖೆಯನ್ನು ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತನಿಖೆಗೆ ಆದೇಶಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ರಾಜ್ಯದಲ್ಲಿ ಮಹಿಳೆಯರು ಮಕ್ಕಳ ಮೇಲೆ ಅನಿಯಂತ್ರಿತವಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದು ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳನ್ನು ನಿಯಂತ್ರಿಸಲು ಗಂಭೀರವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಾಲ್ಲೂಕು ಕಚೇರಿ ವೃತ್ತದಲ್ಲಿ ಸೇರಿ ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಳೆದ ನಲವತ್ತು ವರ್ಷಗಳಲ್ಲಿ ಧರ್ಮಸ್ಥಳ ನಡೆದಿರುವ ಎಲ್ಲ ಪ್ರಕರಣಗಳನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ತಹಶಿಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಮತ್ತೊಬ್ಬ ಸಂಚಾಲಕ ರಾಜುಸಣ್ಣಕ್ಕಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿಪಿ.ಆಂಜನೇಯ, ಸಿಪಿಐ(ಎಂ) ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ಕಾರ್ಮಿಕ ಮುಖಂಡ ಪಿ.ಎ.ವೆಂಕಟೇಶ್, ಪ್ರಜಾವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮುತ್ತೇಗೌಡ, ಹನುಮೇಗೌಡ, ಮುನಿನಾರಾಯಣಪ್ಪ, ಮಹಿಳಾ ಸಂಘಟನೆಯ ಕವಿತಾ, ಎಸ್‌ಎಫ್ಐ ಸಂಘಟನೆಯ ತಾಲ್ಲೂಕು ಅಧ್ಯಕ್ಷ ನಟರಾಜು, ಮುಖಂಡರಾದ ರಘುಕುಮಾರ್, ಚೌಡಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.