ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ
ದೇವನಗೊಂದಿಯಲ್ಲಿ ಕುಂದು ಕೊರತೆ ಸಭೆ : ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಚ್ಚೇಗೌಡ ಹೇಳಿಕೆ
ಹೊಸಕೋಟೆ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿಗಳಿಂದ ಪ್ರತಿ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲು ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ತಿಳಿಸಿದರು.
ತಾಲೂಕಿನ ದೇವನಗೊಂದಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಪಲಾನುಭವಿಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳೊಂದಿಗೆ ಪ್ರತಿ ಮನೆಗೆ ಕಾರ್ಡ್ ತಲುಪಿಸಿ ಮತ ಕೇಳಿದ್ದರ ಪರಿಣಾಮವಾಗಿ ಚುನಾವಣೆಯಲ್ಲಿ ಉತ್ತಮ ಪಲಿತಾಂಶದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಸರ್ಕಾರ ರಚನೆ ನಂತರದ ಒಂದೇ ತಿಂಗಳಿನಲ್ಲಿ ಚುನವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿ ಅನುಷ್ಠಾನ ಮಾಡಿ ಬಡ ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಪ್ರಗತಿಗೆ ಮುಂದಾಯಿತು. ಸುಮಾರು ಎರಡೂವರೆ ವರ್ಷದಿಂದ ನೀಡುತ್ತಿರುವ ಗೃಹಲಕ್ಷಿö್ಮ, ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಬಡ ಕುಟುಂಬದ ನೆಮ್ಮದಿ ಬದುಕಿಗೆ ಪೂರಕವಾಗಿದ್ದು ಅದರ ಸಾಧಕ-ಭಾಧಕಗಳ ಕುರಿತು ಅವಲೋಕಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಲಾನುಭವಿಗಳ ಸಭೆ ನಡೆಸಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕ ಶರತ್ ಬಚ್ಚೇಗೌಡರ ನಿರ್ದೇಶನದಂತೆ ಸಭೆ ನಡೆಸಲಾಗುತ್ತಿದ್ದು ಶೇ.100ರಷ್ಟು ಯೋಜನೆಯ ಗುರಿ ತಲುಪುವುದು ಉದ್ದೇಶವಾಗಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಭೋದನಹೊಸಹಳ್ಳಿ ಮಂಜುನಾಥ್ ಮಾತನಾಡಿ ಸಭೆಗಳಲ್ಲಿ ಗೃಹಲಕ್ಷ್ಮಿ ಹಣ ಬಂದಿಲ್ಲ, ಗೃಹಜ್ಯೋತಿ ಯೋಜನೆ ಬರ್ತಿಲ್ಲ., ಅನ್ನಭಾಗ್ಯದ ಅಕ್ಕಿ ಕೊಡ್ತಿಲ್ಲ ಎಂಬ ದೂರುಗಳು ಬರುತ್ತಿದ್ದು ತಾಂತ್ರಿಕ ಸಮಸ್ಯೆ ಇರುತ್ತದೆ. ಆದಾಯ ತೆರಿಗೆ ಕಟ್ಟಿದ್ರೆ ಅಕ್ಕಿ ಕೊಡೊಲ್ಲ, ಗೃಹ ಲಕ್ಷ್ಮಿ ಹಣ ಬರೋಲ್ಲ, ನಿಗದಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ರೆ ಬಿಲ್ ಬರುತ್ತೆ, ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಎಂದರು.
ಸಭೆಯಲ್ಲಿ ಸರಿಯಾದ ಸಮಯಕ್ಕೆ ಬಸ್ ಬರೋಲ್ಲ, ಸಾಕಷ್ಟು ಸಮಯದಲ್ಲಿ ಗ್ರಾಮಕ್ಕೆ ಬರಬೇಕಾದ ಬಸ್ ದುನ್ನಸಂದ್ರ ಕ್ರಾಸ್ ಬಳಿ ತಿರುವು ಪಡೆದು ಬೆಂಗಳೂರಿಗೆ ತೆರಳುತ್ತೆ, ಇದರಿಂದ ಸಾಕಷ್ಟು ಸಮಸ್ಯೆ ಶಾಲೆ ಕಾಲೇಜು ಮಕ್ಕಳಿಗೆ ಆಗುತ್ತಿದೆ ಎಂದು ಅಧಿಕಾರಿಗಳ ಬಳಿ ಸಮಸ್ಯೆಯ ಬೆಳಕು ಚೆಲ್ಲಿದರು.
ಗ್ರಾಪಂ ಅಧ್ಯಕ್ಷೆ ರತ್ನ ಗೋವಿಂದರಾಜ್, ಪಿಡಿಓ ಹರೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಹೇಮಣ್ಣ, ತಾಲೂಕು ಸಮಿತಿ ಸದಸ್ಯರಾದ ಅಮ್ಜದ್ ಬೇಗ್, ಸಯ್ಯದ್ ಮೆಹಬೂಬ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲತಾರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.





