ಖಾಸಗಿ ಕಂಪನಿ ಗಳಲ್ಲಿ ಕನ್ನಡಿಗರಿಗೆ ಸಂಪೂರ್ಣ ಉದ್ಯೋಗ ನೇಮಕಾತಿ ಕರವೇ ಹೋರಾಟಕ್ಕೆ ಸಂದ ಜಯ–ಜಿಲ್ಲಾದ್ಯಕ್ಷ ಪುರುಷೋತ್ತಮ್ ಗೌಡ
ದೊಡ್ಡಬಳ್ಳಾಪುರ,. ಕರ್ನಾಟಕದ ಎಲ್ಲಾ ಖಾಸಗಿ ಕಂಪನಿ ಹಾಗೂ ಕೈಗಾರಿಕೆಗಳಲ್ಲಿ ಸಿ. ಮತ್ತು ಡಿ. ದರ್ಜೆ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯ ಗೊಳಿಸುವ ವಿದೇಯಕಕ್ಕೆ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿರುವುದು ಸ್ವಾಗತರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ ಗೌಡ ಹೇಳಿದ್ದಾರೆ.
ಕನ್ನಡಿಗರ ನೇಮಕಾತಿ ಬಗ್ಗೆ ಸರ್ಕಾರವನ್ನು ಅಭಿನಂದಿಸಿ ಮಾತನಾಡಿದ ಪುರುಷೋತ್ತಮ್ ಗೌಡ, ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ ರಾಜ್ಯದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆಂಬುದು ಕನ್ನಡಿಗರ ಬಹುದಿನದ ಬೇಡಿಕೆಯಾಗಿತ್ತು. ಇದಕ್ಕೆ ಇಂಬು ಕೊಟ್ಟಂತೆ ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಹೋರಾಟಗಳನ್ನು ಹಮ್ಮಿಕೊಂಡಿತ್ತು. ಈಗ ರಾಜ್ಯ ಸರ್ಕಾರ ಕನ್ನಡಿಗರಿಗೆ ಖಾಸಗಿ ಕಾರ್ಖಾನೆಗಳಲ್ಲಿ ಸಿ. ಮತ್ತು ಡಿ. ದರ್ಜೆ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿ ನಿರ್ಧಾರ ಕೈಗೊಂಡಿರುವುದು ನಾರಾಯಣ ಗೌಡರ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ. ಸರ್ಕಾರ ಬರೀ ಆದೇಶ ಹೊರಡಿಸಿ ಸುಮ್ಮನಾಗಬಾರದು. ಸಂಪೂರ್ಣವಾಗಿ ಅನುಷ್ಠಾನ ಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಹಾಗಾದಾಗ ಮಾತ್ರ ಕನ್ನಡಿಗರು ಉದ್ಯೋಗಕ್ಕಾಗಿ ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪುತ್ತದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕೆಂದು ಪುರುಷೋತ್ತಮ್ ಗೌಡ ಹೇಳಿದ್ದಾರೆ.